ದಾಬಸ್ಪೇಟೆ: ಸೌಂದರ್ಯ ಪದವಿಪೂರ್ವ ಹಾಗೂ ಪದವಿ ಕಾಲೇಜು ವತಿಯಿಂದ ತ್ಯಾಮಗೊಂಡ್ಲು ಪಟ್ಟಣದಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
‘ಮತದಾನ ನಮ್ಮ ಕರ್ತವ್ಯ, ತಪ್ಪದೇ ಮತ ಚಲಾಯಿಸಿ’ ಎಂದು ವಿದ್ಯಾರ್ಥಿಗಳು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಬೀದಿಗಳಲ್ಲಿ ಜಾಥಾ ನಡೆಸಿದರು. ಇದೇ ತಿಂಗಳ 18ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೆರೇಪಿಸಿದರು.
‘ಚುನಾವಣೆಯಲ್ಲಿ ಮತದಾನ ಮಾಡುವೆ’ ಎಂದು ಮತದಾರರಿಂದ ಸಹಿ ಸಂಗ್ರಹಿಸಲಾಯಿತು. ಅಭ್ಯರ್ಥಿಗಳು ಒಡ್ಡುವ ಆಮಿಷಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಯಿತು.
‘ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಪ್ರತಿಯೊಂದು ಮತವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವವಾಗಿದೆ. ನಾನು ಮತದಾನ ಮಾಡುವುದರೊಂದಿಗೆ, ನಮ್ಮ ಸ್ನೇಹಿತರಿಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ಹೇಳುತ್ತೇನೆ’ ಎಂದು ಯುವ ಮತದಾರ ರಂಜಿತ್ ತಿಳಿಸಿದರು.