ಯಲಹಂಕ: ಚಿಕ್ಕಜಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ನಿರ್ವಹಣೆ ಮಾಡಲು ಒಂದು ಎಕರೆ ಜಾಗ ಮತ್ತು ₹20 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.
ಚಿಕ್ಕಜಾಲ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಮನೆಮನೆಯಿಂದಸಂಗ್ರಹಿಸಿ ಗೊಬ್ಬರ ಮಾಡಬೇಕು. ಪ್ಲಾಸ್ಟಿಕ್, ಪೇಪರ್ ಮತ್ತಿತರ ತ್ಯಾಜ್ಯವಸ್ತು ಗಳನ್ನು ಸುಡುವುದು ಅಥವಾಕೆರೆಗೆ ಹಾಕುವುದರ ಬದಲು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿದರೆ ಮಾರಾಟ ಮಾಡಬಹುದಾಗಿದೆ’ ಎಂದರು.
₹75 ಲಕ್ಷ ಮೊತ್ತದಲ್ಲಿ ಚಿಕ್ಕಜಾಲ ಗ್ರಾಮಪಂಚಾಯಿತಿಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಸವಲತ್ತುಗಳ ವಿತರಣೆ: 94ಸಿಸಿ ಅಡಿಯಲ್ಲಿ 40 ಜನರಿಗೆ ತಾತ್ಕಾಲಿಕ ಹಕ್ಕುಪತ್ರ, 40 ಜನರಿಗೆ ಶುದ್ಧ ಕ್ರಯಪತ್ರ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ 10 ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಲಾಯಿತು.
ವಿಧಾನಪರಿಷತ್ ಸದಸ್ಯ ಎಂ. ನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಪತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಉದಯ ಶಂಕರ್, ಕಾಂಗ್ರೆಸ್ ಮುಖಂಡರಾದ ಕೆ.ಅಶೋಕನ್, ದಾನೇಗೌಡ, ಕೆ.ಶ್ರೀನಿವಾಸಯ್ಯ ಇದ್ದರು.