ಬೆಂಗಳೂರು: ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ರವಿ ಚನ್ನಣ್ಣನವರ ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ಪಿ ಆಗಿ ವರ್ಗಾವಣೆಗೊಂಡು ತಿಂಗಳೇ ಕಳೆದಿದೆ. ಅವರ ಜಾಗಕ್ಕೆ ಬಂದಿರುವ ರಮೇಶ್ ಬಾನೋತ್, ಚನ್ನಣ್ಣನವರ ಅಭಿಮಾನಿಗಳ ಕಾಟದಿಂದ ಬೇಸತ್ತಿದ್ದಾರೆ.
ಡಿಸಿಪಿ ಅವರಿಗೆ ಇಲಾಖೆ ಪ್ರತ್ಯೇಕ ಮೊಬೈಲ್ ಸಂಖ್ಯೆ ನೀಡಿದೆ. ಚನ್ನಣ್ಣನವರ ಬಳಸುತ್ತಿದ್ದ ಅದೇ ಸಂಖ್ಯೆಯನ್ನು ರಮೇಶ್ ಅವರಿಗೆ ಹಸ್ತಾಂತರಿಸಲಾಗಿದೆ. ‘ರವಿ ಚನ್ನಣ್ಣನವರ ಅಭಿಮಾನಿ’ ಎಂದು ಹೇಳಿಕೊಂಡು ಆ ಸಂಖ್ಯೆಗೆ ನಿತ್ಯವೂ ನೂರಾರು ಕರೆಗಳು ಬರುತ್ತಿದ್ದು, ರಮೇಶ್ ಅವರ ಬೇಸರಕ್ಕೆ ಕಾರಣವಾಗಿದೆ.
‘ಚನ್ನಣ್ಣನವರ ವರ್ಗಾವಣೆ ಆಗಿದ್ದಾರೆ’ ಎಂದು ಅಭಿಮಾನಿಗಳಿಗೆ ಹೇಳಿ ಹೇಳಿ ಸುಸ್ತಾಗಿರುವ ರಮೇಶ್, ಇದೀಗ ಇಲಾಖೆಯ ಮೊಬೈಲ್ ಸಂಖ್ಯೆಯನ್ನೇ ಬದಲಾಯಿಸಿದ್ದಾರೆ. ಹೊಸ ಸಂಖ್ಯೆ ಬಳಸುತ್ತಿದ್ದಾರೆ.
ಟ್ವೀಟ್ನಲ್ಲೂ ಮನವಿ: ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರಮೇಶ್ ಅವರ ಮೊಬೈಲ್ಗೆ ಚನ್ನಣ್ಣನವರ ಅಭಿಮಾನಿಗಳಿಂದಲೇ ಹೆಚ್ಚು ಕರೆಗಳು ಬರುತ್ತಿದ್ದವು. ಅದು ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಲಾರಂಭಿಸಿತ್ತು.