ಬೆಂಗಳೂರು: ‘ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕು’ ಎಂದು ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.
ಕಾಂಗ್ರೆಸ್ ಯುವ ಘಟಕದ ವತಿಯಿಂದ ಆಯೋಜಿಸಿದ್ದ ‘ಮಹಿಳಾ ಶಕ್ತಿ, ದೇಶದ ಶಕ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂವಿಧಾನದ ಮೂಲಕ ಮಹಿಳೆಗೆ ಮೀಸಲಾತಿ ಸಿಕ್ಕರೂ, ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 11ರಷ್ಟು ಮಾತ್ರ ಇದೆ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ನಾನೊಬ್ಬಳೇ ಶಾಸಕಿಯಾಗಿ ಆಯ್ಕೆ ಆಗಿದ್ದೇನೆ’ ಎಂದು ಹೇಳಿದರು.
ಶ್ರುತಿ ರವಿ ಮಾತನಾಡಿ, ‘ಮಹಿಳೆಯರು ಉದ್ಯಮಿಗಳಾದರೆ, ಅವರು ಅಗತ್ಯಗಳನ್ನು ಈಡೇರಿಸಿಕೊಳ್ಳಬಲ್ಲರು. ಬೇಕಾದ ಶಿಕ್ಷಣ ಪಡೆದರೆ ಗುರಿಗಳನ್ನು ಸುಲಭವಾಗಿ ತಲುಪಬಲ್ಲರು’ ಎಂದು ಹೇಳಿದರು.
‘ದೌರ್ಜನ್ಯಗಳ ಕುರಿತು ಮೀ ಟೂ ಅಭಿಯಾನದ ಮೂಲಕ ಮಹಿಳೆಯರು ಧೈರ್ಯವಾಗಿ ಮಾತನಾಡುತ್ತಿರುವುದು ಒಳ್ಳೆಯದು’ ಎಂದು ಪದ್ಮಾ ಶಿವಮೊಗ್ಗ ಹೇಳಿದರು.
ಲೇಖಕಿ ಪಲ್ಲವಿ ಐದೂರು ಮಾತನಾಡಿ, ‘ಅಹಿತಕರ ವರ್ತನೆಯನ್ನು ಯಾರೇ ತೋರಿದಾಗ, ಹೆಣ್ಣು ಮಕ್ಕಳು ಯಾವುದೇ ಅಳುಕಿಲ್ಲದೆ ಪ್ರತಿಭಟಿಸಬೇಕು’ ಎಂದರು.
ಕ್ರೀಡಾಪಟು ಮಮತಾ ಸನತ್ ಕುಮಾರ್, ‘ದೇಶದಲ್ಲಿ ಕ್ರೀಡೆಗಳ ಪ್ರೋತ್ಸಾಹಕ್ಕೆ ಸೌಲಭ್ಯಗಳ ಕೊರತೆ ಇದೆ. ಬಾಲಕಿಯರು ಕ್ರೀಡಾರಂಗ ದಲ್ಲಿ ಮಿಂಚಬೇಕಾದರೆ, ಮಹಿಳೆಯರೇ ದಾರಿ ಮಾಡಿಕೊಡಬೇಕು’ ಎಂದರು.