ಬೆಂಗಳೂರು: ‘ರೈಲುಗಾಲಿ ಕಾರ್ಮಿಕರಿಗೆ ನೀಡುತ್ತಿರುವ ವೇತನವನ್ನು ₹18 ಸಾವಿರದಿಂದ ₹26 ಸಾವಿರಕ್ಕೆ ಹೆಚ್ಚಿಸಬೇಕು. ಹೊಸ ಪಿಂಚಣಿ ಪದ್ಧತಿಯಿಂದ ಅನ್ಯಾಯವಾಗುತ್ತಿದ್ದು, ಹಳೆ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸಬೇಕು’ ಎಂದು ರೈಲುಗಾಲಿ ಕಾರ್ಖಾನೆಯ ಮಜ್ದೂರ್ ಒಕ್ಕೂಟದ ಅಧ್ಯಕ್ಷ ಡಿ.ಮಹೇಂದ್ರ ಆಗ್ರಹಿಸಿದರು.
ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಯಲಹಂಕದ ರೈಲುಗಾಲಿ ಕಾರ್ಖಾನೆಯ ಮಜ್ದೂರ್ ಒಕ್ಕೂಟದ ಕಾರ್ಮಿಕರು ಕಾರ್ಖಾನೆಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
‘ಇಲಾಖೆಯಲ್ಲಿ ಖಾಸಗೀಕರಣ ಹಾಗೂ ಹೊರಗುತ್ತಿಗೆಯನ್ನು ನಿಲ್ಲಿಸಬೇಕು. ಚಾಲ್ತಿಯಲ್ಲಿರುವ ಇನ್ಸೆಂಟಿವ್ ಬೋನಸ್ ದರವನ್ನು ಪರಿಶೀಲಿಸಿ ತಕ್ಷಣ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎ.ವಿಜಯಕುಮಾರ್ ಮಾತನಾಡಿ, ‘ಕಾರ್ಖಾನೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಅಪ್ರೆಂಟಿಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಶೀಘ್ರವಾಗಿ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.