ಯಲಹಂಕ: ಜಿಕೆವಿಕೆ ತಿರುವಿನಿಂದ ಜಕ್ಕೂರಿಗೆ ಸಂಪರ್ಕ ಕಲ್ಪಿಸುವ ಜೋಡಿರಸ್ತೆ ಬದಿಯ ಚರಂಡಿಗಳಿಂದ ತೆಗೆದ ಹೂಳನ್ನು ರಸ್ತೆ ಬದಿಯೇ ಹಾಕಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.
ಕಿರಿದಾಗಿರುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತ್ಯಾಜ್ಯವನ್ನು ರಸ್ತೆ ಪಕ್ಕ ಸುರಿದಿರುವುದರಿಂದ ರಸ್ತೆಯ ಅಗಲ ಮತ್ತಷ್ಟು ಕಿರಿದಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಜಿಕೆವಿಕೆ ಪ್ರಯಾಣಿಕರ ತಂಗುದಾಣದಿಂದ ಜಕ್ಕೂರಿನ ಬಡಾವಣೆಗಳಿಗೆ ತೆರಳುವ ಜನರು ಈ ಪಾದಚಾರಿ ಮಾರ್ಗವನ್ನೇ ಬಳಸುತ್ತಾರೆ. ಹೂಳನ್ನು ತೆಗೆಯಲು ತೆರವು ಮಾಡಲಾಗಿದ್ದಚರಂಡಿಯ ಸ್ಲ್ಯಾಬ್ಗಳನ್ನು ಮರುಜೋಡಣೆ ಮಾಡಿಲ್ಲ. ಇದರಿಂದ ಪಾದಚಾರಿ ಮಾರ್ಗದಲ್ಲಿ ಹೊಂಡಗಳು ಸೃಷ್ಟಿಯಾಗಿವೆ.
ಜನರು ರಸ್ತೆ ಮೇಲೆ ನಡೆದರೆ ‘ವಾಹನಗಳು ಬಂದು ಗುದ್ದುವ ಭಯದಲ್ಲಿ’, ಪಾದಚಾರಿ ಮಾರ್ಗದ ಮೇಲೆ ನಡೆದರೆ ‘ಹೊಂಡದಲ್ಲಿ ಬೀಳುವ’ ಭಯದಲ್ಲಿದ್ದಾರೆ. ರಾತ್ರಿ ವೇಳೆ ಇಲ್ಲಿ ನಡೆದುಕೊಂಡು ಹೋಗುವುದಂತೂ ಬಹಳ ದುಸ್ಥರವಾಗಿದೆ.
‘ಕೆಲವರು ಈ ಮಾರ್ಗದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಸ್ಥಳೀಯರಾದ ಕುಮಾರ್ ಆರೋಪಿಸಿದರು.
‘ಸಂಬಂಧಪಟ್ಟವರು ಇತ್ತ ಗಮನಹರಿಸಿ ಹೂಳನ್ನು ತೆರವು ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್ಗಳನ್ನು ಜೋಡಿಸಬೇಕು’ ಎಂದು ಅವರು ಒತ್ತಾಯಿಸಿದರು.