ಯಲಹಂಕ: ‘ಸುಧಾರಿತ ತಂತ್ರಜ್ಞಾನದಿಂದ ಮುಂಬರುವ ದಿನಗಳಲ್ಲಿ 50 ಲಕ್ಷ ಜನರು ಕೆಲಸ ಕಳೆದುಕೊಳ್ಳಲಿದ್ದು, ಉದ್ಯೋಗಕ್ಕೆ ಹೆಚ್ಚಿನ ಪೈಪೋಟಿ ಸೃಷ್ಟಿಯಾಗಲಿದೆ’ ಎಂದು ಗ್ಲೋಬಲ್ ಎಡ್ಜ್ ಸಾಫ್ಟ್ವೇರ್ ಸಂಸ್ಥೆಯ ಉಪಾಧ್ಯಕ್ಷ ನಾಗನಗೌಡ ಜಕ್ಕನಗೌಡರ್ ಹೇಳಿದರು.
ಬಿಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದಿನ ದಿನಮಾನದಲ್ಲಿಸವಾಲುಗಳನ್ನು ಮೆಟ್ಟಿನಿಲ್ಲುವ ಛಲ ಬೆಳೆಸಿಕೊಳ್ಳಬೇಕು. ಜಾಗತಿಕ ಮಟ್ಟದ ಅಗತ್ಯತೆಗಳಿಗೆ ಅನುಗುಣವಾಗಿ ವಿಶೇಷ ವೃತ್ತಿ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದರು.
ಕಾಲೇಜಿನ ಟ್ರಸ್ಟಿ ದಯಾನಂದ ಪೈ,‘ವಿದ್ಯಾರ್ಥಿಗಳು ದೊಡ್ಡಮಟ್ಟದ ಕನಸುಗಳನ್ನು ಕಾಣುವ ಮೂಲಕ ಸಾಧನೆಯ ಕಡೆಗೆ ಗಮನಹರಿಸಬೇಕು’ ಎಂದರು.
ಪ್ರಾಂಶುಪಾಲ ಜಿ.ಎನ್.ಮೋಹನ್ ಬಾಬು,‘ವಿದ್ಯಾರ್ಥಿಗಳು ವೃತ್ತಿಜೀವನ ಮತ್ತು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಕಾಗ್ನಿಜೆಂಟ್ ಕಂಪನಿ ವತಿಯಿಂದ ಉತ್ತಮ ವಿದ್ಯಾರ್ಥಿ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.