ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲೆ ಸಾವು: ಹಾಜರಿಗೆ ಸೂಚನೆ

Last Updated 19 ಜನವರಿ 2019, 19:03 IST
ಅಕ್ಷರ ಗಾತ್ರ

ಬೆಂಗಳೂರು: ಯುವ ವಕೀಲೆ ಧರಣಿ ಸಾವಿಗೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿಯೂ ಆದ ಮಹದೇವಪುರ ವಿಭಾಗದ ಎಸಿಪಿ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಸಿಟಿ ಸಿವಿಲ್‌ ಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ಆರೋಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯ ವಿ.ಸುರೇಶ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ, ಸಿಟಿ ಸಿವಿಲ್ ಕೋರ್ಟ್ (71) ಹೆಚ್ಚುವರಿ ನ್ಯಾಯಾಧೀಶ ಮೋಹನ್ ಪ್ರಭು ಈ ಕುರಿತಂತೆ ಆದೇಶಿಸಿದರು.

ಪ್ರತಿವಾದಿಗಳಾದ ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದರು.

‘ಆರೋಪಿ ವಿ.ಸುರೇಶ್ ಪರ ಯಾರೂ ವಕಾಲತ್ತು ವಹಿಸಬಾರದು’ ಎಂದು ಬೆಂಗಳೂರು ವಕೀಲರ ವಲಯದಲ್ಲಿ ಒತ್ತಾಯ ಕೇಳಿಬಂದಿದ್ದ ಬೆನ್ನಲ್ಲೇ, ವಕೀಲ ಸೈಯ್ಯದ್ ಸಲ್ಮಾನ್ ಖೊಮೇನಿ ಸುರೇಶ್ ಪರ ವಕಾಲತ್ತು ಸಲ್ಲಿಸಿದ್ದರು. ಆದರೆ, ವಿಚಾರಣೆಗೆ ಹಾಜರಾಗಿರಲಿಲ್ಲ. ಈ ವೇಳೆ ಕೋರ್ಟ್ ಹಾಲ್‌ನಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ವಕೀಲರು ಜಮಾಯಿಸಿದ್ದರು.

ವಕೀಲೆ ಧರಣಿ ಅವರು 2018ರ ಡಿ.31ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪ: ‘ಧರಣಿ ವಾಸವಿದ್ದ ಮನೆಕಬಳಿಸಲು ಸ್ಥಳೀಯ ಪಾಲಿಕೆ ಸದಸ್ಯ ವಿ.ಸುರೇಶ್ ಹಾಗೂ ಅವರ ಸಹಚರರು ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಬೇಸತ್ತಿದ್ದ ಧರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂಬುದು ‘ಜಸ್ಟೀಸ್‌ ಫಾರ್‌ ಅಡ್ವೊಕೇಟ್‌ ಧರಣಿ’ ಸಮಿತಿಯ ಆರೋಪ.

ಒತ್ತಾಯ: ಧರಣಿ ಕುಟುಂಬಕ್ಕೆ ಸರ್ಕಾರ ₹ 50 ಲಕ್ಷ ಆರ್ಥಿಕ ನೆರವು ನೀಡಬೇಕು’ ಎಂದು ಸಮಿತಿ ಒತ್ತಾಯಿಸಿದೆ.

'ಸರ್ಕಾರ ಇನ್ನೂ ಗಮನ ಹರಿಸಿಲ್ಲ'

‘ವಕೀಲೆ ಧರಣಿ ಸಾವಿಗೆ ಸರ್ಕಾರ ಇನ್ನೂ ಕಿವಿಗೊಟ್ಟಿಲ್ಲ’ ಎಂದು ‘ಜಸ್ಟೀಸ್ ಫಾರ್ ಅಡ್ವೊಕೇಟ್ ಧರಣಿ’ ಸಮಿತಿಯ ಮುಖಂಡ ಶೆಟ್ಟಿಗೆರೆ ದೇವದಾಸ್ ಆರೋಪಿಸಿದರು.

ಪ್ರಕರಣದ ವಿಚಾರಣೆ ನಂತರ ಮಾತನಾಡಿದ ಅವರು, ‘ಸರ್ಕಾರ ಸಾಮಾನ್ಯ ಜನರ ಸಂಕಷ್ಟಗಳನ್ನು ಮರೆತು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದೆ. ರಾಜ್ಯದಲ್ಲಿ ಒಬ್ಬ ಯುವ ವಕೀಲೆಗೇ ರಕ್ಷಣೆ ಇಲ್ಲವೆಂದರೆ ಉಳಿದವರ ಪಾಡೇನು. ಈ ದಿಸೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಕೂಡಲೇ ಗಮನಹರಿಸಬೇಕು‘ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT