ಮುಂಬೈ: ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾವ್ ಅವರ ಪರ ವಕೀಲರು ಮಂಗಳವಾರ ತಿಳಿಸಿದ್ದಾರೆ.
‘ರಾವ್ ಅವರಿಗೆ ತಲೆಸುತ್ತು ಬಂದಿದ್ದರಿಂದ ಅವರನ್ನು ಸೋಮವಾರ ರಾತ್ರಿ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಕೆಲ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದು ರಾವ್ ಪರ ವಕೀಲ ಆರ್. ಸತ್ಯನಾರಾಯಣ ಅಯ್ಯರ್ ಮಾಹಿತಿ ನೀಡಿದ್ದಾರೆ.
ತಮ್ಮ ಆರೋಗ್ಯ ಕ್ಷೀಣಿಸುತ್ತಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಜೈಲಿನ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಬೇಕು ಹಾಗೂ ಅನಾರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ತಮಗೆ ತಾತ್ಕಾಲಿಕವಾಗಿ ಜಾಮೀನು ನೀಡಬೇಕೆಂದು ಕೋರಿ ರಾವ್ ಅವರು ಬಾಂಬೆ ಹೈಕೋರ್ಟ್ಗೆ ಸೋಮವಾರ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಆರೋಪಿಯಾಗಿರುವ ವರವರ ರಾವ್ ಅವರನ್ನು ನವಿ ಮುಂಬೈನ ತಳೋಜಾ ಜೈಲಿನಲ್ಲಿರಿಸಲಾಗಿತ್ತು.
ರಾವ್ ಅವರ ಆರೋಗ್ಯ ತೀವ್ರ ಹದಗೆಡುತ್ತಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ರಾವ್ ಕುಟುಂಬದ ಸದಸ್ಯರು ಭಾನುವಾರ ಜೈಲಿನ ಅಧಿಕಾರಿಗಳಿಗೆ ಕೋರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.