ನವದೆಹಲಿ: ರೈತರು ತಮ್ಮಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುವ ಎರಡು ಸುಗ್ರೀವಾಜ್ಞೆಗಳ ಅಧಿಸೂಚನೆಯನ್ನು ಕೇಂದ್ರಸರ್ಕಾರ ಹೊರಡಿಸಿದೆ. ರೈತರು ಮಂಡಿಯಿಂದ ಆಚೆಗೆ ಉತ್ಪನ್ನವನ್ನು ಮಾರಲು ಮತ್ತು ಬೆಳೆ ಬೆಳೆಯು ವುದಕ್ಕೂ ಮುನ್ನ ಖಾಸಗಿಯವರ ಜೊತೆ ಕೃಷಿ ಉತ್ಪನ್ನ ಮಾರಾಟ–ಖರೀದಿ ಒಡಂಬಡಿಕೆ ಮಾಡಿಕೊಳ್ಳಲು ಈ ಸುಗ್ರೀವಾಜ್ಞೆಗಳು ನೆರವಾಗುತ್ತವೆ.
ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು), ಹಾಗೂ ಬೆಲೆ ಖಾತರಿ ಮತ್ತು ಬೇಸಾಯ ಸೇವೆಗಳ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಸುಗ್ರೀವಾಜ್ಞೆಗಳನ್ನು 2020ರ ಜೂನ್ 5ರಂದು ಹೊರಡಿಸಲಾಗಿತ್ತು. ಜುಲೈ 20ರಂದು ಈ ಬಗೆಗಿನ ಅಧಿಸೂಚನೆ ಪ್ರಕಟವಾಗಿದೆ.
ಸರ್ಕಾರದ ಅನುಸೂಚಿಯಲ್ಲಿರುವ ಕೃಷಿ ಮಂಡಿಗಳಷ್ಟೇ ಅಲ್ಲದೆ, ರಾಜ್ಯದೊಳಗೆ ಹಾಗೂ ಹೊರಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ.