ಕೋಲ್ಕತ್ತ: ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಮಂಗಳವಾರ ಟೀಕಿಸಿದ್ಧಾರೆ.
ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ, ಹಣಬಲ ಹಾಗೂ ತನ್ನ ಅಧೀನದ ವಿವಿಧ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
‘ಹುತಾತ್ಮರ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ರ್ಯಾಲಿಯನ್ನು ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳವನ್ನು ರಾಜ್ಯದ ಜನರೇ ಆಳುತ್ತಾರೆ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ರಾಜ್ಯಭಾರ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.
‘ಈಗಾಗಲೇ ಮಧ್ಯಪ್ರದೇಶ ಸರ್ಕಾರವನ್ನು ಪತನಗೊಳಿಸಲಾಗಿದೆ. ಇಡೀ ದೇಶವೇ ಈಗ ಕೋವಿಡ್–19 ವಿರುದ್ಧ ಹೋರಾಟ ನಡೆಸುತ್ತಿರುವಾಗ ಬಿಜೆಪಿ ಮಾತ್ರ ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳನ್ನು ಉರುಳಿಸುವಲ್ಲಿ ನಿತರವಾಗಿದೆ.ಬಿಜೆಪಿ ಈ ದೇಶ ಕಂಡ ಅತ್ಯಂತ ವಿಧ್ವಂಸಕಾರಿ ಪಕ್ಷ’ ಎಂದೂ ಟೀಕಿಸಿದರು.
‘ಎಲ್ಲ ರಾಜ್ಯಗಳನ್ನು ಗುಜರಾತಿನವರೇ ಯಾಕೆ ಆಳಬೇಕು? ಒಕ್ಕೂಟ ವ್ಯವಸ್ಥೆಯ ಅಗತ್ಯ ಏನಿದೆ’ ಎಂದು ಪ್ರಶ್ನಿಸಿದ ಅವರು, ‘ಒಂದು ರಾಷ್ಟ್ರ–ಒಂದು ಪಕ್ಷ’ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದು ಬಿಡಿ’ ಎನ್ನುವ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.