ನವದೆಹಲಿ: ದೆಹಲಿಗೆ ಕುಡಿಯುವ ನೀರು ಸರಬರಾಜು ಮಾಡುವ ಯಮುನಾ ನದಿಯ ವಾಜಿರಾಬಾದ್ ಬ್ಯಾರೇಜ್ ಆಸುಪಾಸಿನ ನದಿ ನೀರಿನಲ್ಲಿಅಮೋನಿಯಾ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ಇದರಿಂದಾಗಿ ದೆಹಲಿ ಜಲ ಮಂಡಳಿಯು ತನ್ನ ಮೂರು ನೀರು ಸಂಸ್ಕರಣಾ ಸಾಮರ್ಥ್ಯವನ್ನು ಶುಕ್ರವಾರ ಶೇ 25ರಷ್ಟು ಕಡಿಮೆ ಮಾಡಬೇಕಾಯಿತು.
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಸಂಜೆಯ ಹೊತ್ತಿಗೆ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿತು ಎಂದು ಜಲ ಮಂಡಳಿಯ ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
'ಹರ್ಯಾಣದಲ್ಲಿ ವ್ಯಾಪಕ ಮಳೆಯಾದ ಕಾರಣ ಚರಂಡಿಗಳ ನೀರನ್ನು ಅಲ್ಲಿನ ಅಧಿಕಾರಿಗಳು ನೇರವಾಗಿ ನದಿಗೆ ಬಿಟ್ಟರು. ಅದರಲ್ಲಿ ಮಾಲಿನ್ಯಕಾರಕಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಹೀಗಾಗಿ ದೆಹಲಿಯಲ್ಲಿ ಪರಿಸ್ಥಿತಿ ವಿಷಮಿಸಿತು' ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ವಾಜಿರಾಬಾದ್ ಬ್ಯಾರೇಜ್ಗಿಂತ ಮೇಲಿನ ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳಿಂದ ಬಂದ ಮಲಿನ ನೀರು ನದಿಗೆ ಸೇರಿ, ಮಾಲಿನ್ಯದ ಪ್ರಮಾಣ ಹೆಚ್ಚಾಗಿರಬಹುದು. ಮುನಾಕ್ ಕಾಲುವೆಯಿಂದ ನೀರು ಹರಿಸುವ ಮೂಲಕ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲಾಯಿತು ಎಂದು ಜಲಮಂಡಳಿ ಅಧಿಕಾರಿಗಳು ವಿವರಿಸಿದರು.
ಓಖ್ಲಾ ಬ್ಯಾರೇಜ್ ಆಸುಪಾಸಿನಲ್ಲಿ ನದಿ ನೀರಿನ ಮೇಲೆ ನೊರೆ ಆವರಿಸಿಕೊಂಡಿದ್ದು ಶುಕ್ರವಾರ ಗೋಚರಿಸಿತು. ಇದು ಪ್ರತಿ ವರ್ಷ ಕಂಡು ಬರುವ ನೈಸರ್ಗಿಕ ವಿದ್ಯಮಾನ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.