ಗುವಾಹಟಿ:ಅಸ್ಸಾಂನ ಪೂರ್ವ ಭಾಗದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ನ (ಒಐಎಲ್) ನೈಸರ್ಗಿಕ ಅನಿಲ ಬಾವಿಯಲ್ಲಿ ಬುಧವಾರ ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು,ನಾಲ್ವರು ತಜ್ಞರಿಗೆ ಗಾಯಗಳಾಗಿವೆ.
ಬಾಗ್ಜನ್ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ ಜೂನ್ 9 ರಿಂದ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಸೋರಿಕೆಯನ್ನು ನಿಯಂತ್ರಿಸಲು ಸಿಂಗಪುರದ ತಜ್ಞರ ತಂಡವು ಪ್ರಯತ್ನದಲ್ಲಿ ತೊಡಗಿದ್ದಾಗಲೇ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಲಿ ದೂರದವರೆಗೆ ಬೆಂಕಿ ದಟ್ಟವಾಗಿ ಕಪ್ಪು ಹೊಗೆ ಆವರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಅನಿಲ ಬಾವಿಯಲ್ಲಿ ಮೇ 27ರಿಂದ ಅನಿಲ ಸೋರಿಕೆಯಾಗಿ, ಜೂನ್ 9ರಂದು ಬೆಂಕಿ ಹೊತ್ತಿಕೊಂಡಿತ್ತು.ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.ದುರಂತ ನಡೆದ ಸಮೀಪದ ಗ್ರಾಮಗಳಲ್ಲಿ ವಾಸಿಸುತ್ತಿದ್ದ 10,000 ಸಾವಿರ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರನ್ನು ಈಗಲೂ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ.