ಗಾಜಿಯಾಬಾದ್ (ಉತ್ತರಪ್ರದೇಶ): ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಅಸುನೀಗಿದ ಪತ್ರಕರ್ತ ವಿಕ್ರಂ ಜೋಶಿ ಅವರ ಕುಟುಂಬದವರಿಗೆಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ₹10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
‘ಕೃತ್ಯವೆಸಗಿದ ಒಂಬತ್ತು ಹಲ್ಲೆಕೋರರನ್ನು ಬಂಧಿಸಲಾಗಿದೆ. ಸಹೋದರ ಸೊಸೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ವಿಕ್ರಂ ಜೋಶಿ ಅವರು ಜು.16 ರಂದು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸದೆ ನಿರ್ಲಕ್ಷ್ಯ ತೋರಿದ ಪ್ರತಾಪ ವಿಹಾರ್ ಠಾಣೆಯ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ತಿಳಿಸಿದರು.
ವಿಕ್ರಂ ಜೋಶಿ ಹತ್ಯೆಗೆ ಸಂಬಂಧಿಸಿದಂತೆ ಅವರ ಸಹೋದರ ಪ್ರಕರಣ ದಾಖಲಿಸಿದ್ದು, ದೂರಿನಲ್ಲಿ ವಿಕ್ರಂಗೆ ಜೀವ ಬೆದರಿಕೆ ಕೂಡ ಬಂದಿತ್ತು ಎಂದು ಹೇಳಿದ್ದಾರೆ. ಇದರಲ್ಲಿ ಶಂಕಿತ ಆರೋಪಿಗಳಾದ ರವಿ ಶಹನೂರ್ ಅಲಿಯಾಸ್ ಚೋಟು, ಆಕಾಶ್ ಮತ್ತು ಅನಾಮದೇಯ ವ್ಯಕ್ತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.