ನವದೆಹಲಿ: ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ರೇಖೆಯುದ್ದಕ್ಕೂ ಪಾಕಿಸ್ತಾನದ ಪಡೆಗಳು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುತ್ತಾ ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಭಾರತ ತೀವ್ರ ಆಕ್ಷೇಪವನ್ನು ದಾಖಲಿಸಿದೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಭಯೋತ್ಪಾದಕರನ್ನು ನುಸುಳಿಸುವ ಗುರಿಯನ್ನು ಪಾಕಿಸ್ತಾನದ ಪಡೆಗಳು ಹೊಂದಿವೆ ಎಂದು ಭಾರತ ಖಂಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಜೂನ್ ತಿಂಗಳಿನವರೆಗೂ ಗಡಿಯಲ್ಲಿ ಕದನವಿರಾಮ ಉಲ್ಲಂಘನೆಯ ಒಟ್ಟು 2,432 ಪ್ರಕರಣಗಳು ನಡೆದಿವೆ. ಇಂಥ ಯತ್ನಗಳಿಂದಾಗಿ 14 ಮಂದಿ ಭಾರತೀಯರು ಮೃತಪಟ್ಟಿದ್ದರೆ, 88 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗಡಿಯೊಳಗೆ ಉಗ್ರರು ನುಸುಳಲು ಪಾಕ್ ಪಡೆಗಳು ನಿರಂತರವಾಗಿ ಬೆಂಬಲ ನೀಡುತ್ತಿವೆ. ಈ ಕುರಿತು ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರ ಮೂಲಕ ಆಕ್ಷೇಪ ದಾಖಲಿಸಿದ ನಂತರವೂ ಪಾಕ್ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.