ಜಮ್ಮು: ‘ಕಾಶ್ಮೀರದ ಕೇಸರಿಗೆ ಭೌಗೋಳಿಕ ಮಾನ್ಯತೆ (ಜಿಐ) ದೊರೆತಿದ್ದು, ಕಣಿವೆಯ ಉತ್ಪನ್ನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿರುವುದು ಐತಿಹಾಸಿಕ ಹೆಜ್ಜೆ’ ಎಂದು ಲೆಫ್ಟಿನೆಂಟ್ ಗವರ್ನರ್ ಜಿ.ಸಿ ಮುರ್ಮು ಹೇಳಿದ್ದಾರೆ.
‘ಭೌಗೋಳಿಕ ಮಾನ್ಯತೆಯಿಂದಾಗಿ ಕಾಶ್ಮೀರದ ಕೇಸರಿಯ ಕಲಬೆರಕೆಗೆ ಕಡಿವಾಣ ಬೀಳಲಿದೆ. ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೊರಕಲಿದೆ. ಇದರಿಂದ ಬೆಳೆಗೆ ಉತ್ತಮ ಬೆಲೆ ಲಭಿಸಲಿದೆ’ ಎಂದು ಮುರ್ಮು ತಿಳಿಸಿದ್ದಾರೆ.
‘ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಗೆ ಕೇಂದ್ರ ಸರ್ಕಾರ ಜಿಐ, ನೋಂದಣಿ ಪ್ರಮಾಣಪತ್ರವನ್ನು ನೀಡಿದೆ. ಈ ಪ್ರಮಾಣಪತ್ರ ದೊರಕಲುಜಿ.ಸಿ ಮುರ್ಮು ಅವರ ಪಾತ್ರ ಮಹತ್ವದ್ದಾಗಿದೆ’ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ರಾಷ್ಟ್ರೀಯ ಕೇಸರಿ ಕಾರ್ಯಾಚರಣೆ (ಎನ್ಎಂಎಸ್) ಕ್ರಮಗಳಿಂದಾಗಿವಿಶ್ವದ ಅತ್ಯಂತ ದುಬಾರಿ ಮಸಾಲೆ ಕೇಸರಿ ಬೆಳೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿರುವ ಪಾಂಪೋರ್ನಲ್ಲಿ ಈ ಬಾರಿ ಭರ್ಜರಿ ಬೆಳೆ ಬರುವ ನಿರೀಕ್ಷೆಯಿದೆ.
‘ಎನ್ಎಂಎಸ್ ಅಡಿ ₹411 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಈ ಯೋಜನೆಯಡಿ, ಕೇಸರಿಗಾಗಿ 3,715 ಹೆಕ್ಟೇರ್ ಪ್ರದೇಶವನ್ನು ಪುನರುಜ್ಜೀವನಗಳಿಸಲು ಉದ್ದೇಶಿಸಲಾಗಿತ್ತು. ಈಗ 2,500 ಹೆಕ್ಟೇರ್ ಪ್ರದೇಶವನ್ನುಪುನರುಜ್ಜೀವನಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.