ಪುದುಚೇರಿ: ಬಜೆಟ್ ಪ್ರತಿಯನ್ನು ತಮ್ಮ ಅನುಮೋದನೆಗೆ ಕಳುಹಿಸಿಲ್ಲ ಎಂದು ಆಕ್ಷೇಪಿಸಿದ್ದ ಪುದುಚೇರಿಯ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರು ಸೋಮವಾರ, ವಿಧಾನಸಭೆಯ ಬಜೆಟ್ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದರಿಂದಲೂ ದೂರ ಉಳಿದರು.
ನಿಗದಿಯಂತೆ ಅಧಿವೇಶನ ಬೆಳಿಗ್ಗೆ 9.30ಕ್ಕೆ ಲೆಫ್ಟಿನಂಟ್ ಗವರ್ನರ್ ಅವರ ಭಾಷಣದೊಂದಿಗೇ ಆರಂಭವಾಗಬೇಕಿತ್ತು. ಲೆಫ್ಟಿನಂಟ್ ಗವರ್ನರ್ ಅವರಿಗೆ ಗೌರವವಂದನೆ ಸಲ್ಲಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಆದರೆ, ಬೇಡಿ ಅವರು ಹಿಂದಿನ ದಿನವೇ ಅಧಿವೇಶನಕ್ಕೆ ಗೈರುಹಾಜರಾಗುವ ತೀರ್ಮಾನ ಮತ್ತು ಕಾರಣವನ್ನು ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರಿಗೆ ತಿಳಿಸಿದ್ದರು.ಸ್ಪೀಕರ್ ವಿ.ಪಿ.ಶಿವಕೊಳುಂದು ಅವರುತಿರುಕ್ಕುರಲ್ನ ಸಾಲುಗಳನ್ನು ಓದುವ ಮೂಲಕ 15 ನಿಮಿಷ ತಡವಾಗಿ ಅಧಿವೇಶನ ಆರಂಭವಾಯಿತು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ ಅವರು ರಾಜ್ಯಪಾಲರ ಇಂದಿನ ಅಧಿವೇಶನದ ಭಾಷಣವನ್ನು ಯಥಾಸ್ಥಿತಿಯಲ್ಲಿ ಇಡಬೇಕು ಎಂದು ಕೋರುವ ನಿರ್ಣಯ ಮಂಡಿಸಿದರೆ, ಆಡಳಿತ ಕಾಂಗ್ರೆಸ್ ಪಕ್ಷದ ಟಿ.ಜಯಮೂರ್ತಿ ಅನುಮೋದಿಸಿದರು. ಇದನ್ನು ಅಂಗೀಕರಿಸುವ ತೀರ್ಮಾನವನ್ನುಸ್ಪೀಕರ್ ಪ್ರಕಟಿಸಿದರು.
'ಅಧಿವೇಶನ ಸೇರುವ ಮೊದಲು ತಮಗೆ ಬಜೆಟ್ ಪ್ರತಿ ತಲುಪಿಲ್ಲ. ಅದಕ್ಕೆ ಅನುಮೋದನೆಯನ್ನು ಪಡೆದುಕೊಂಡಿಲ್ಲ. ಪ್ರತಿ ಕಳುಹಿಸದೇ ಇರುವುದು ಸರ್ಕಾರದಿಂದಾಗಿರುವ ಗಂಭೀರವಾದ ಲೋಪ' ಎಂದು ಕಿರಣ್ ಬೇಡಿ ಅವರು ಮುಖ್ಯಮಂತ್ರಿ ಅವರಿಗೆ ಬರೆದಿದ್ದ ಪತ್ರದಲ್ಲಿ ಆಕ್ಷೇಪಿಸಿದ್ದರು.