ಮುಂಬೈ: ಮಕ್ಕಳಿಗೆ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ಶೀಘ್ರವೇ 'ಮಕ್ಕಳ ಸುರಕ್ಷಾ ನೀತಿ'ಯನ್ನು ಜಾರಿಗೊಳಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಯಶೋಮತಿ ಠಾಕೂರ್ ಸೋಮವಾರ ತಿಳಿಸಿದರು.
ಈ ನೀತಿಯು ಕೇವಲ ಅನಾಥ ಮಕ್ಕಳಿಗಷ್ಟೇ ಅಲ್ಲ. ಸುರಕ್ಷತೆ ಮತ್ತು ಆರೈಕೆಯ ಅವಶ್ಯಕತೆ ಇರುವ ಇತರ ಮಕ್ಕಳಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.
‘ಪ್ರತಿಯೊಂದು ಮಗುವಿಗೂ ಪರಿವಾರದ ಪ್ರೀತಿ, ವಾತ್ಸಲ್ಯ ಪಡೆಯುವ ಹಕ್ಕಿದೆ. ಹಾಗಾಗಿ ಈ ನೀತಿಯಡಿ ಮಗುವಿಗೆ ಕೌಟುಂಬಿಕ ವಾತಾವರಣವನ್ನು ಕಲ್ಪಿಸಲಾಗುವುದು' ಎಂದು ತಿಳಿಸಿದರು.
ಕುಟುಂಬವೊಂದಕ್ಕೆ ನಿರ್ದಿಷ್ಟ ಅವಧಿಗೆ ಮಗುವಿನ ಪಾಲನೆ–ಪೋಷಣೆ ಹೊಣೆಯನ್ನು ನೀಡಲಾಗುವುದು. ಉದ್ದೇಶ, ಸಾಮರ್ಥ್ಯ ಮತ್ತು ಮಕ್ಕಳ ಆರೈಕೆ ಅನುಭವದ ಆಧಾರದ ಮೇಲೆ ಕುಟುಂಬಗಳ ಆಯ್ಕೆ ಮಾಡಲಿದ್ದು, ಅವರಿಗೆ ತರಬೇತಿಯನ್ನೂ ನೀಡಲಾಗುವುದು ಎಂದುಯಶೋಮತಿ ಮಾಹಿತಿ ನೀಡಿದರು.
ಈಸಾಕು ಕುಟುಂಬಗಳು ಶಾಶ್ವತ ವ್ಯವಸ್ಥೆಯಲ್ಲ ಮತ್ತು ನಿರ್ದಿಷ್ಟ ಮಗುವಿನ ಮೇಲೆ ಆ ಕುಟುಂಬಗಳಿಗೆ ಯಾವುದೇ ಕಾನೂನು ಹಕ್ಕು ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.