ಮುಂಬೈ:‘ಶಿವಸೇನಾ ಮತ್ತು ಬಿಜೆಪಿ ಒಗ್ಗೂಡಿದರೂ ಜಂಟಿಯಾಗಿ ಸ್ಪರ್ಧಿಸುವುದಿಲ್ಲ’ ಎಂದು ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಸ್ಪಷ್ಟಪಡಿಸಿದ್ಧಾರೆ.
‘ಯಾವ ಪಕ್ಷದ ಬೆಂಬಲವೂ ಇಲ್ಲದೇ ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಲು ಸಿದ್ಧರಾಗಿ’ ಎಂದು ಜೆ.ಪಿ ನಡ್ಡಾ ಅವರು ಕಾರ್ಯಕರ್ತರಿಗೆ ಕರೆ ನೀಡಿದ ಮರುದಿನವೇ ಪಾಟೀಲ್ ಈ ಹೇಳಿಕೆ ನೀಡಿದ್ಧಾರೆ.
ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಯಾವುದೇ ಪ್ರಾದೇಶಿಕ ಪಕ್ಷದೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವುದಿಲ್ಲ. ಒಂದು ವೇಳೆ ಹಂಚಿಕೊಂಡರೆ, ಬಿಹಾರ ಮತ್ತು ಹರಿಯಾಣದಲ್ಲಿ ಅನುಸರಿಸಿದ ಸೂತ್ರ ಇಲ್ಲಿಯೂ ಪ್ರತಿಬಿಂಬಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಹಿತಾಸಕ್ತಿ ಕಾಪಾಡಲು ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಯ ಸಂಸದೀಯ ಮಂಡಳಿ ರಾಜ್ಯ ಘಟಕಕ್ಕೆ ಶಿಫಾರಸು ಮಾಡಿದರೆ, ಶಿವಸೇನೆ ಜೊತೆಗೆ ಒಗ್ಗೂಡಿದರೂ, ನಾವು ಜಂಟಿಯಾಗಿ ಭವಿಷ್ಯದಲ್ಲಿ ಎಂದಿಗೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾವು ಕಳೆದ ಐದು ವರ್ಷಗಳಿಂದ ಶಿವಸೇನೆಯೊಂದಿಗೆ ಮೃದು ಧೋರಣೆ ತಳೆದಿದ್ದೆವು. 2019 ರ ವಿಧಾನಸಭಾ ಚುನಾವಣೆಯ ನಂತರ ಹೆಚ್ಚಿನ ಖಾತೆಗಳನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೆವು. ಆದರೆ, ಪ್ರಾದೇಶಿಕ ಪಕ್ಷದೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.