ನವದೆಹಲಿ: ಕಾರ್ಗಿಲ್ ಯುದ್ಧದ ಸಮಯದಲ್ಲಿ ಶತ್ರುಗಳನ್ನು ಸದೆ ಬಡಿದ ನಮ್ಮ ಯೋಧರ ಪರಾಕ್ರಮ, ಸಮರ್ಪಣಾಭಾವ ನಮಗೆ ಸದಾ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ 21ನೇ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.
ಈ ತಿಂಗಳ ‘ಮನ್ ಕಿ ಬಾತ್’ನಲ್ಲಿ ಈ ಪ್ರಸ್ತಾಪಿಸಿ, ಭಾರತೀಯ ಸೇನೆಯ ವೀರ ಯೋಧರ ಧೈರ್ಯ, ಸಾಹಸಗಳನ್ನು ಮೋದಿ ಗುಣಗಾನ ಮಾಡಿದರು.
On Kargil Vijay Diwas, we remember the courage and determination of our armed forces, who steadfastly protected our nation in 1999. Their valour continues to inspire generations.
‘ದೇಶದಲ್ಲಿ ಕೊರೊನಾ ಸೋಂಕಿನ ಬೆದರಿಕೆ ಇನ್ನೂ ನಿವಾರಣೆಯಾಗಿಲ್ಲ. ಈ ಪಿಡುಗಿನ ವಿರುದ್ಧ ನಾವು ಇನ್ನೂ ಹೆಚ್ಚು ಜಾಗೃತರಾಗಬೇಕಾದ ಅಗತ್ಯವಿದೆ. ಮಾಸ್ಕ್ ಧರಿಸುವುದನ್ನು ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರಿಸಬೇಕು’ ಎಂದೂ ಅವರು ಹೇಳಿದರು.
ಕೋವಿಡ್–19ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂಥ ಸಂದರ್ಭದಲ್ಲಿಯೂ ಬಿಹಾರ, ಜಾರ್ಖಂಡ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕೆಲವರು ಸ್ಥಳೀಯ ಉತ್ಪನ್ನಗಳ ಮಾರಾಟ ಉತ್ತೇಜಿಸುತ್ತಿರುವುದನ್ನು ಶ್ಲಾಘಿಸಿದರು.
‘ಈ ಪಿಡುಗಿನ ನಡುವೆಯೇ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಅಣಿಯಾಗಿದ್ದೇವೆ. ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ಹಾಗೂ ಕೋವಿಡ್ ಮುಕ್ತ ಮಾಡುವ ಪಣ ತೊಡಬೇಕು’ ಎಂದು ಅವರು ಯುವಕರಿಗೆ ಕರೆ ನೀಡಿದರು.
ಭಾರಿ ಮಳೆ, ಪ್ರವಾಹದಿಂದ ದೇಶದ ಅನೇಕ ಕಡೆಗಳಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರೊಂದಿಗೆ ಇಡೀ ದೇಶವೇ ಇದೆ. ಸಂತ್ರಸ್ತರಿಗೆ ನೆರವು ನೀಡಲು ಸದಾ ಸಿದ್ಧ ಎಂದೂ ಅವರು ಹೇಳಿದರು.