ನವದೆಹಲಿ: ಕಟುವಾದ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಹಿರಿಯ ವಕೀಲ ಪ್ರಶಾಂತಭೂಷಣ್ ಹಾಗೂ ಟ್ವಿಟರ್ ವಿರುದ್ಧ ಸುಪ್ರಿಂಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿರುವ ನ್ಯಾಯಪೀಠ, ಬುಧವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಪ್ರಶಾಂತ ಭೂಷಣ್ ಹಾಗೂ ಟ್ವಿಟರ್ ವಿರುದ್ಧ ಜುಲೈ 9ರಂದು ಈ ಪ್ರಕರಣ ದಾಖಲಿಸಲಾಗಿತ್ತು.
ಕೋರ್ಟ್ನ ಘನತೆಗೆ ಧಕ್ಕೆ ಹಾಗೂ ಆಡಳಿತಕ್ಕೆ ಭಂಗವನ್ನುಂಟು ಮಾಡಿದ್ದು ಸಾಬೀತಾದಲ್ಲಿ, ತಪ್ಪಿತಸ್ಥರಿಗೆ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಎಂ.ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಕ್ಕೆ ಸಂಬಂಧಿಸಿ ಪ್ರಶಾಂತಭೂಷಣ್ ಅವರು 2019ರಲ್ಲಿ ಟ್ವೀಟ್ ಮಾಡಿದ್ದರು. ಈ ಸಂಬಂಧ ಆಗಿನ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಭೂಷಣ್ ವಿರುದ್ಧ ನಿಂದನಾ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕಾಗಿ ಸಹ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.