ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣ ಪತ್ರವಾಗಿ ಇ–ಮೇಲ್‌ ಪರಿಗಣನೆ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸುನಂದಾ ಪುಷ್ಕರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಶಿ ತರೂರ್‌ ಅವರಿಗೆ ಇ–ಮೇಲ್‌ನಲ್ಲಿ ಬರೆದಿರುವ ಪತ್ರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಸಂದೇಶಗಳನ್ನೇ ಮರಣ ಪತ್ರವೆಂದು ಪರಿಗಣಿಸುವುದಾಗಿ ದೆಹಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹೇಳಿದ್ದಾರೆ.

ವಿಷ ಸೇವನೆಯಿಂದಾಗಿ ಸುನಂದಾ ಮೃತಪಟ್ಟಿದ್ದಾರೆ. ಅವರ ಶವ ಪತ್ತೆಯಾದ ಹೋಟೆಲ್‌ನ ಕೊಠಡಿಯಲ್ಲಿ 27 ಆಲ್ಪ್ರಾಕ್ಸ್‌ ಮಾತ್ರೆಗಳು ದೊರಕಿದ್ದವು. ಆದರೆ, ಅವರು ಎಷ್ಟು ಮಾತ್ರೆಗಳನ್ನು ತೆಗೆದುಕೊಂಡಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದೂ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

2014ರ ಜನವರಿ 17ರಂದು ದಕ್ಷಿಣ ದೆಹಲಿಯ ಐಷಾರಾಮಿ ಹೋಟೆಲ್‌ವೊಂದರ ಕೋಣೆಯಲ್ಲಿ ಸುನಂದಾ ಪುಷ್ಕರ್ ಶವ ಪತ್ತೆಯಾಗಿತ್ತು.

‘ನನಗೆ ಬದುಕು ಸಾಕೆನಿಸಿದೆ. ನಾನು ಸಾಯಲು ಇಚ್ಛಿಸುತ್ತೇನೆ’ ಎಂದು ಸುನಂದಾ ಅವರು ಮೃತಪಡುವುದಕ್ಕೆ ಒಂಬತ್ತು ದಿನಗಳ ಮೊದಲು ಶಶಿ ತರೂರ್‌ ಅವರಿಗೆ ಇ–ಮೇಲ್‌ನಲ್ಲಿ ತಿಳಿಸಿದ್ದರು.

‘ಸುನಂದಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಭಾವಿಸುವುದಾದರೆ, ಸಾವಿಗೂ ಮುನ್ನ ಅವರು ದೌರ್ಜನ್ಯಕ್ಕೆ ಒಳಗಾಗಿರಬೇಕು. ಅವರ ಮದುವೆಯಾಗಿ ಏಳು ವರ್ಷಗಳ ನಂತರ ಈ ಘಟನೆ ಸಂಭವಿಸಿದೆ. ಅಂದರೆ, ಅವರ ಸಾವಿಗೆ ಯಾವುದೋ ಕುಮ್ಮಕ್ಕು ಕಾರಣವಾಗಿರಬಹುದು. ನ್ಯಾಯಾಲಯ ಈ ನಿಟ್ಟಿನಲ್ಲಿ ವಿಚಾರಣೆ ನಡೆಸಬೇಕು’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್‌ ಶ್ರೀವಾತ್ಸವ್ ಮನವಿ ಮಾಡಿದರು.

ತರೂರ್‌ಗೆ ಸಮನ್ಸ್‌: 5ಕ್ಕೆ ತೀರ್ಪು

ನವದೆಹಲಿ: ಸುನಂದಾ ಪುಷ್ಕರ್‌ ಸಾವಿನ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರಿಗೆ ಸಮನ್ಸ್ ಜಾರಿ ಮಾಡಬೇಕೇ ಅಥವಾ ಬೇಡವೇ ಎಂಬ ಕುರಿತ ಆದೇಶವನ್ನು ದೆಹಲಿ ಕೋರ್ಟ್‌ ಜೂನ್‌ 5ಕ್ಕೆ ಕಾಯ್ದಿರಿಸಿದೆ.

ತರೂರ್‌ ಅವರಿಗೆ ಸಮನ್‌ ಜಾರಿ ಮಾಡಲು ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದು ಪ್ರಕರಣದ ಪರ ವಕೀಲರು ವಾದಿಸಿದ ನಂತರದಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಈ ನಿರ್ಧಾರ ಕೈಗೊಂಡರು.

ಪ್ರಕರಣ ಸಂಬಂಧ ಸುನಂದಾ ಪತಿ, ಶಶಿ ತರೂರ್‌ ವಿರುದ್ಧ ಪೊಲೀಸರು ಮೇ 14ರಂದು ಮೂರು ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ಪುಷ್ಕರ್‌ ಅವರ ಆತ್ಮಹತ್ಯೆಗೆ ತರೂರ್‌ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT