ಅಗರ್ತಲ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆ ಎದುರಿಸುತ್ತಿದ್ದರೂ ಹಿರಿಯ ಐಪಿಎಸ್ ಅಧಿಕಾರಿ ಕೆ. ನಾಗರಾಜ್ ಅವರಿಗೆ ನೀಡಲಾಗಿದ್ದ ಬಡ್ತಿಯನ್ನು ತ್ರಿಪುರಾ ಸರ್ಕಾರ ಹಿಂಪಡೆದಿದೆ.
ನಾಗರಾಜ್ ಅವರ ವಿರುದ್ಧ ಶಿಸ್ತು ಕ್ರಮ ಬಾಕಿ ಇದ್ದರೂ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿತ್ತು.
‘ಸಾರ್ವಜನಿಕ ಹಿತಾಸಕ್ತಿಯಿಂದಾಗಿ, ನಾಗರಾಜ್ ಅವರಿಗೆ ನೀಡಿದ್ದ ಬಡ್ತಿಯನ್ನು ತ್ರಿಪುರಾ ರಾಜ್ಯಪಾಲರು ರದ್ದುಪಡಿಸಿದ್ದಾರೆ’ ಎಂದು ಹೆಚ್ಚುವರಿ ಕಾರ್ಯದರ್ಶಿ ಸಂತೋಷ್ ದಾಸ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಐಪಿಎಸ್ ಕೇಡರ್ ನಿಯಂತ್ರಿಸುತ್ತಿರುವ ಗೃಹ ವ್ಯವಹಾರಗಳ ಸಚಿವಾಲಯ, ‘ಅಕ್ರಮ ಬಡ್ತಿ’ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಕುರಿತು ತಿದ್ದುಪಡಿ ಕ್ರಮ ಕೈಗೊಳ್ಳುವಂತೆ ಹಾಗೂ ಅಧಿಕಾರಿಗೆ ಐಜಿಪಿ ಹುದ್ದೆಗೆ ಹಿಂಬಡ್ತಿ ನೀಡುವಂತೆ ಸಚಿವಾಲಯ ತ್ರಿಪುರಾ ಸರ್ಕಾರಕ್ಕೆ ಆದೇಶಿಸಿತ್ತು. ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.