ಮಂಗಳೂರು: ಆಹಾರ ಇಲಾಖೆಯಲ್ಲಿ ಪಡಿತರ ವ್ಯವಸ್ಥೆ ಇನ್ನಷ್ಟು ಸರಿಪಡಿಸಲು ಗ್ರಾಮ ಮಟ್ಟದ ಪಡಿತರ ಜಾಗೃತ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನ್ಯಾಯಬೆಲೆ ವ್ಯಾಪ್ತಿಯ ಪಂಚಾಯಿತಿ ಸದಸ್ಯರು ಹಾಗೂ ಪ.ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬ ಸದಸ್ಯರು ಇರಲಿದ್ದಾರೆ. ಪಿಡಿಒ ಕಾರ್ಯದರ್ಶಿಯಾಗಿದ್ದಾರೆ. ಈ ಸಮಿತಿಯ ಅಧಿಕಾರ ಅವಧಿ ಮೂರು ವರ್ಷದ್ದಾಗಿದೆ.
ಪ್ರತಿ ತಿಂಗಳು ಏಳನೇ ತಾರೀಖಿಗೆ ಪಡಿತರ ಚೀಟಿದಾರರ ಸಭೆ ಆಹಾರ ಅದಾಲತ್ ನಡೆಸಲಿದೆ. ಅಲ್ಲದೇ ಬಯೋಮೆಟ್ರಿಕ್ ಸರಿಹೊಂದದೇ ಇದ್ದರೆ, ಈ ಸಮಿತಿಯ ಸದಸ್ಯರ ಬಯೋಮೆಟ್ರಿಕ್ ಪಡೆದು, ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.
ನ್ಯಾಯಬೆಲೆ ಅಂಗಡಿಗೆ ಪಡಿತರ ಸಾಮಗ್ರಿ ಬಂದಾಗ, ಆ ಚಲನ್ ಗೆ ಈ ಸಮಿತಿ ಅಧ್ಯಕ್ಷರ ಸಹಿ ಪಡೆಯಬೇಕು. ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲಿ ನ್ಯಾಯಬೆಲೆ ಅಂಗಡಿಗಳ ಡೀಲರ್ ಗಳಿಗೆ ತರಬೇತಿ ನೀಡಲಾಗುವುದು ಎಂದರು.