ಬೆಂಗಳೂರು: ಯಡಿಯೂರು ವಾರ್ಡ್ನಲ್ಲಿ ಬಿಬಿಎಂಪಿ ನಿರ್ಮಿಸಿರುವ ಉತ್ಕೃಷ್ಟ ಗುಣಮಟ್ಟದ ಸಾವಯವ ಗೊಬ್ಬರ ತಯಾರಿ ಘಟಕಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.
ಯಡಿಯೂರು ಕೆರೆಯಲ್ಲಿ ನಿರ್ಮಿಸಿರುವ ಈ ಘಟಕದಲ್ಲಿ ತಿಂಗಳಿಗೆ 12 ಲಕ್ಷ ಲೀಟರ್ ಸಾವಯವ ಗೊಬ್ಬರ ತಯಾರಿಸಬಹುದು. ನಗರದ 774 ಉದ್ಯಾನಗಳಿಗೆ ಈ ಗೊಬ್ಬರ ಪೂರೈಕೆ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿದೆ.
‘ಉದ್ಯಾನಗಳಲ್ಲಿನ ಸಸಿಗಳಿಗೆ ಸದ್ಯ ರಾಸಾಯನಿಕ ಗೊಬ್ಬರ ಬಳಸಲಾಗುತ್ತಿದ್ದು, ಇದಕ್ಕಾಗಿ ಪ್ರತಿ ವರ್ಷ ₹8.50 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಮೊತ್ತ ಪಾಲಿಕೆಗೆ ಈಗ ಉಳಿತಾಯ ಆಗುವ ಜತೆಗೆ ಭೂಮಿಯ ಫಲವತ್ತತೆ ಉಳಿಯಲಿದೆ’ ಎಂದು ಯಡಿಯೂರು ವಾರ್ಡ್ ಸದಸ್ಯೆ ಪೂರ್ಣಿಮಾ ತಿಳಿಸಿದರು.
‘ಯಡಿಯೂರು ವಾರ್ಡ್ನಲ್ಲಿ ಉತ್ಪತ್ತಿಯಾಗುವಹಸಿ ತ್ಯಾಜ್ಯದಿಂದ ಸದ್ಯ 250 ಕೆ.ವಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗ ಸಾವಯವ ಗೊಬ್ಬರ ತಯಾರಿ ಘಟಕ ನಿರ್ಮಿಸುವ ಮೂಲಕ ಮಾದರಿ ಕೆಲಸ ಮಾಡಲಾಗಿದೆ. ಇದರ ಜತೆಗೆ ₹49 ಲಕ್ಷ ವೆಚ್ಚದಲ್ಲಿ ಎರೆಹುಳು ಗೊಬ್ಬರ ತಯಾರಿ ಘಟಕವನ್ನೂ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.
‘2,500 ಚದರ ಮೀಟರ್ ವಿಸ್ತೀರ್ಣದಲ್ಲಿ ಘಟಕ ನಿರ್ಮಾಣವಾಗಿದ್ದು, ₹49 ಲಕ್ಷ ವೆಚ್ಚವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.