ಚಂಡೀಗಡ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ಥಾಪಿಸಿರುವ ತೆಹ್ರೀಕ್–ಎ–ಇನ್ಸಾಫ್ ಪಕ್ಷದ ಮಾಜಿ ಶಾಸಕ ಬಲದೇವ್ ಕುಮಾರ್, ಭಾರತದಲ್ಲಿ ಆಶ್ರಯ ನೀಡುವಂತೆ ಮಂಗಳವಾರ ಮನವಿ ಮಾಡಿದ್ದಾರೆ.
‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ನಮ್ಮ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಭಯೋತ್ಪಾದನೆ ತೀವ್ರವಾಗಿ ಬೆಳೆಯುತ್ತಿದ್ದು, ಅದಕ್ಕೆ ಬೆಂಬಲವೂ ವ್ಯಕ್ತವಾಗುತ್ತಿದೆ ಎಂದು ಬಲದೇವ್ ಹೇಳಿದ್ದಾರೆ.
ಪತ್ನಿಹಾಗೂ ಇಬ್ಬರು ಮಕ್ಕಳೊಂದಿಗೆ ಕಳೆದ ತಿಂಗಳು ಭಾರತಕ್ಕೆ ಬಂದಿರುವ ಬಲದೇವ್, ಸದ್ಯ ಲೂಧಿಯಾನ ಜಿಲ್ಲೆಯ ಖನ್ನಾ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ.
‘ನನಗೆ ಆಶ್ರಯ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಲು ಇಲ್ಲಿಗೆ ಬಂದಿರುವೆ. ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಸರಿಯಾಗಿಲ್ಲ’ ಎಂದು ಹೇಳಿದ್ದಾರೆ.
ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಬಾರಿಕೋಟ್ ಕ್ಷೇತ್ರದಿಂದ ಬಲದೇವ್ ಆಯ್ಕೆಯಾಗಿದ್ದರು.