ಜಕಾರ್ತ: ಇಂಡೊನೇಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಜಾವಾದ ದ್ವೀಪ ಸಮೀಪದ ಆಳ ಸಮುದ್ರದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ ಸಂಭವಿಸಿದ ಈ ಭೂಕಂಪನ ತೀವ್ರತೆಯು ರಿಕ್ಟರ್ ಮಾಪನದಲ್ಲಿ 6.9ರಷ್ಟು ದಾಖಲಾಗಿತ್ತು. ಇದರಿಂದ ಲಘು ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ಭೂಕಂಪನದಿಂದ ಇಂಡೊನೇಷ್ಯಾ ರಾಜಧಾನಿ ಜಕಾರ್ತದ ನಿವಾಸಿಗಳು ಆತಂಕಕ್ಕೆ ಒಳಗಾಗಿ, ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಕೆಲ ಕಾಲ ಇದ್ದರು.
ಇಂಡೊನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯು ಈ ಭೂಕಂಪನದಿಂದ ಸಮುದ್ರದಲ್ಲಿ ಸುನಾಮಿಯ ಸಾಧ್ಯತೆ ಇದೆ. ಸುಮಾರು 10 ಅಡಿ (3 ಮೀಟರ್) ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಿತ್ತು. ಆದರೆ ಕೆಲ ಗಂಟೆಗಳ ಬಳಿಕ ಈ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.
ಭೂಮಿ ಕಂಪಿಸಿದ್ದರಿಂದ ಆಘಾತಗೊಂಡು ಮೂವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಟ್ಟಡ ಅಲುಗಾಡಿದ್ದರಿಂದ ಆತಂಕಗೊಂಡ ಮತ್ತೊಬ್ಬರು ಮನೆಯಿಂದ ಹೊರಕ್ಕೆ ಓಡಿ ಬರುವಾಗ ಮೃತಪಟ್ಟಿದ್ದಾರೆ. ಅಲ್ಲದೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.