ಈ ತಿಂಗಳ 27ರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಎರಡು ವರದಿಗಳು ದಿಗ್ಭ್ರಮೆಯನ್ನು ಉಂಟುಮಾಡಿವೆ. ಮೊದಲನೆಯದು ಪಿರಿಯಾಪಟ್ಟಣದಲ್ಲಿ, ಸೋತ ಕಾಂಗ್ರೆಸ್ ನಾಯಕ ವೆಂಕಟೇಶ್ ಅವರು ‘ಜೆಡಿಎಸ್ ಕಾರ್ಯಕರ್ತರನ್ನು ಹುಚ್ಚು ನಾಯಿಗೆ ಹೊಡೆಯುವಂತೆ ಅಟ್ಟಾಡಿಸಿ ಹೊಡೆಯಿರಿ’ ಎಂದು ಹೇಳಿರುವುದು.
ಇನ್ನೊಂದು, ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ‘ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು, ಅವರು ಹಾಕಿಕೊಂಡಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎನಿಸಿತ್ತು’ ಎಂದು ‘ಸಾಮ್ನಾ’ ಪತ್ರಿಕೆಯಲ್ಲಿ ಹೇಳಿರುವುದು.
ನಮ್ಮ ದೇಶದಲ್ಲಿ ಒಂದಷ್ಟು ಜನರ ಬೆಂಬಲ ಇರುವ ವ್ಯಕ್ತಿಗೆ ಯಾರಿಗೆ ಬೇಕಾದರೂ ಹೊಡೆಯುವಂತೆ ಕರೆ ಕೊಡುವ ಸ್ವಾತಂತ್ರ್ಯವನ್ನು ಯಾರು ಕೊಟ್ಟರು? ಕೋರ್ಟು ಎಚ್ಚರಿಸಲು ಸಾಧ್ಯವಿಲ್ಲವೇ? -ಎಮ್ಮಾರ್ಕೆ, ಮೈಸೂರು