ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧ

ಸೋಲಾಗಬಹುದು, ಆದರೂ ಹೋರಾಟದಿಂದ ಹಿಂಜರಿಯೆವು: ಇಮ್ರಾನ್‌ ಎಚ್ಚರಿಕೆ
Last Updated 15 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆ ಇದೆ. ಆದರೆ ನಾವಾಗಿಯೇ ಯುದ್ಧವನ್ನು ಆರಂಭಿಸುವುದಿಲ್ಲ’ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಸುದ್ದಿ ವಾಹಿನಿ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ನಾನು ಯುದ್ಧವನ್ನು ವಿರೋಧಿಸುವ, ಶಾಂತಿಪ್ರಿಯ ವ್ಯಕ್ತಿ. ಆದ್ದರಿಂದ ಭಾರತದ ವಿರುದ್ಧ ನಾವಾಗಿಯೇ ಯುದ್ಧವನ್ನು ಆರಂಭಿಸುವುದಿಲ್ಲ. ಆದರೆ ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳು ಸಾಂಪ್ರದಾಯಿಕ ಯುದ್ಧ ನಡೆಸಿದರೆ, ಅಣ್ವಸ್ತ್ರ ಬಳಕೆಯಲ್ಲೇ ಅದು ಕೊನೆಗೊಳ್ಳುವ ಅಪಾಯವಿದೆ. ಯುದ್ಧದಲ್ಲಿ ಪಾಕಿಸ್ತಾನ ಸೋಲಬಹುದು. ಆದರೆ, ಪಾಕಿಸ್ತಾನದ ಮುಂದೆ ಯುದ್ಧಮಾಡಿ ಅಥವಾ ಶರಣಾಗಿ ಎಂಬ ಎರಡು ಆಯ್ಕೆಗಳನ್ನು ನೀಡಿದರೆ, ಪಾಕಿಸ್ತಾನವು ಕೊನೆಯ ಉಸಿರಿರುವವರೆಗೂ ಹೋರಾಡಲಿದೆ’ ಎಂದರು.

‘ನಾವು ಇತ್ತೀಚಿನವರೆಗೂ ಭಾರತದ ಜೊತೆ ಮಾತುಕತೆಗೆ ಪ್ರಯತ್ನಿಸಿದ್ದೆವು. ಆದರೆ ಅವರು ಹಣಕಾಸು ಕಾರ್ಯಪಡೆಯಲ್ಲಿ (ಎಫ್‌ಎಟಿಎ) ನಮ್ಮನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಯತ್ನಿಸಿದರು. ಒಂದುವೇಳೆ ಅದು ಸಾಧ್ಯವಾದರೆ ನಮ್ಮ ಅರ್ಥ ವ್ಯವಸ್ಥೆ ಬುಡಮೇಲಾಗುತ್ತದೆ. ಭಾರತವು ಇಂಥ ಪ್ರಯತ್ನವನ್ನು ಆರಂಭಿಸುತ್ತಿದ್ದಂತೆಯೇ ನಾವು ಮಾತುಕತೆಯ ಆಯ್ಕೆ ರದ್ದುಪಡಿಸಿದೆವು. ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನಂತರವಂತೂ ಮಾತುಕತೆಯ ಎಲ್ಲ ಬಾಗಿಲುಗಳೂ ಮುಚ್ಚಿದವು’ ಎಂದು ಇಮ್ರಾನ್‌ ಖಾನ್‌ ಹೇಳಿದರು.

ಪಾಕಿಸ್ತಾನದ ಕೆಲವು ರಾಜಕೀಯ ಪಕ್ಷಗಳು ಹಾಗೂ ಧಾರ್ಮಿಕ ಸಂಘಟನೆಗಳ ನಾಯಕರು ಗಡಿನಿಯಂತ್ರಣ ರೇಖೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮೆರವಣಿಗೆ ಮುಂದೂಡಲಾಗಿದೆ.ಸೆ.27 ರಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ತಾನು ಭಾಷಣ ಮಾಡಲಿದ್ದು, ಅದು ಮುಗಿಯುವವರೆಗೂ ಮೆರವಣಿಗೆ ನಡೆಸದಂತೆ ಇಮ್ರಾನ್‌ ಖಾನ್‌ ಮನವಿ ಮಾಡಿದ್ದರಿಂದ ಕಾರ್ಯಕ್ರಮ ಮುಂದೂಡಲು ಸಮಿತಿ ನಿರ್ಧರಿಸಿದೆ ಎಂದು ‘ದಿ ಡಾನ್‌’ ವರದಿ ಮಾಡಿದೆ.

20ಕ್ಕೂ ಹೆಚ್ಚು ಭಯೋತ್ಪಾದಕರು?

‘ಶ್ರೀನಗರದ ಪಟ್ಟಣದೊಳಗೆ ಸುಮಾರು 20ಕ್ಕೂ ಹೆಚ್ಚು ಭಯೋತ್ಪಾದಕರು ಇದ್ದು, ಕೆಲವು ಪ್ರದೇಶಗಳಲ್ಲಿ ಅವರು ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಸಡಿಲಿಸಿದ್ದರೂ ಜನಜೀವನ ಸಹಜ ಸ್ಥಿತಿಗೆ ಬಂದಿಲ್ಲ. ಪಟ್ಟಣದೊಳಗೆ ಭಯೋತ್ಪಾದಕರು ಇರುವುದೇ ಇದಕ್ಕೆ ಕಾರಣ. ಕೆಲವು ಪ್ರದೇಶಗಳಲ್ಲಿ ಭಯೋತ್ಪಾದಕರು ಮುಕ್ತವಾಗಿ ಓಡಾಡುತ್ತಾ, ಅಂಗಡಿಗಳನ್ನು ಮುಚ್ಚುವಂತೆ ವ್ಯಾಪಾರಿಗಳಿಗೆ ಬೆದರಿಸುತ್ತಿರುವುದು ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಜಮ್ಮು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌, ‘ನಗರದೊಳಗೆ ಭಯೋತ್ಪಾದಕರು ಇದ್ದಿರಬಹುದು. ಆದರೆ ಅವರು ಮುಕ್ತವಾಗಿ ಓಡಾಡುತ್ತಿದ್ದಾರೆ, ಬೆದರಿಕೆ ಒಡ್ಡುತ್ತಿದ್ದಾರೆ ಎಂಬುದು ಉತ್ಪ್ರೇಕ್ಷೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT