ನವದೆಹಲಿ: ಈಶಾನ್ಯ ಸಿರಿಯಾ ಪ್ರಾಂತ್ಯದ ಮೇಲೆ ಟರ್ಕಿಯು ಏಕಪಕ್ಷೀಯವಾಗಿ ಮಿಲಿಟರಿ ದಾಳಿ ನಡೆಸಿರುವುದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಆ ಭಾಗದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲಿದೆ ಎಂದು ಪ್ರತಿಪಾದಿಸಿದೆ.
ಬುಧವಾರ ಟರ್ಕಿಯ ಜೆಟ್ ವಿಮಾನಗಳು ಸಿರಿಯಾದ ಕುರ್ದಿಶ್ ನಿಯಂತ್ರಣದ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದ್ದವು. ಇದರಿಂದ ಸಾವಿರಾರು ನಾಗರಿಕರು ಮನೆಬಿಟ್ಟು ಪಲಾಯನ ಮಾಡುವಂತಾಗಿತ್ತು.
ಈ ಕಾರ್ಯವು ಮಾನವೀಯತೆಗೆ ಧಕ್ಕೆ ಉಂಟು ಮಾಡುತ್ತಿದೆ. ನಾಗರಿಕರು ಯಾತನೆ ಅನುಭವಿಸುವಂತೆ ಮಾಡಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಟರ್ಕಿಯು ಸಿರಿಯಾದ ಭೌಗೋಳಿಕ ಸಮಗ್ರತೆಯನ್ನು ಗೌರವಿಸಿ ಸಂಯಮದಿಂದ ವರ್ತಿಸಬೇಕು. ಎರಡೂ ದೇಶಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.