ಖಾರ್ತೂಮ್: ಬಹ್ರಿ ಪ್ರದೇಶದಲ್ಲಿರುವ ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡು ಹದಿನೆಂಟು ಭಾರತೀಯರು ಸೇರಿದಂತೆ ಇಪ್ಪತ್ಮೂರು ಮಂದಿ ಮೃತಪಟ್ಟಿದ್ದು,130 ಮಂದಿ ಗಾಯಗೊಂಡಿದ್ದಾರೆ.
ಈ ದುರಂತದಲ್ಲಿ ಭಾರತೀಯರು ಮೃತಪಟ್ಟಿರುವುದನ್ನು ಸುಡಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ. ‘ಆದರೆ, ಇದು ಅಧಿಕೃತ ವರದಿಯಲ್ಲ. ನಾಪತ್ತೆಯಾದವರ ಹೆಸರು ಮೃತಪಟ್ಟವರ ಪಟ್ಟಿಯಲ್ಲಿರಬಹುದು. ಮೃತದೇಹ ಸಂಪೂರ್ಣ ಕರಕಲಾಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ’ ಎಂದು ಕಚೇರಿ ತಿಳಿಸಿದೆ.
ಈ ಕಾರ್ಖಾನೆಯಲ್ಲಿ 68ಕ್ಕೂ ಹೆಚ್ಚು ಭಾರತದ ಕಾರ್ಮಿಕರಿದ್ದರು. ದುರಂತ ನಡೆದ ಸ್ಥಳದಲ್ಲಿ ಅಗ್ನಿ ಸುರಕ್ಷತಾ ಕ್ರಮ ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುಲಭವಾಗಿ ಬೆಂಕಿಗೆ ಆಹುತಿಯಾಗುವ ವಸ್ತುಗಳನ್ನು ಯಾವುದೇ ಸುರಕ್ಷತೆಯಿಲ್ಲದೆ ಸಂಗ್ರಹಿಸಿಟ್ಟಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಘಟನೆ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.