ಹರಪನಹಳ್ಳಿ: ತಾಲ್ಲೂಕಿನ ದುಗ್ಗಾವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೋದಂಡರಾಮ ಸೋಮವಾರ ಭೇಟಿ ನೀಡಿ ಶಿಥಿಲಿಗೊಂಡಿದ್ದ ಕಟ್ಟಡಗಳನ್ನು ಪರಿಶೀಲಿಸಿದರು.
ಮಾತನಾಡಿದ ಅವರು, ಹಳೆ ಕಟ್ಟಡಗಳು ಬಹಳಷ್ಟು ಶಿಥಿಲಾವ್ಯವಸ್ಥೆ ತಲುಪಿವೆ. ತುರ್ತಾಗಿ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಪ್ರಕೃತಿ ವಿಕೋಪ ಅನುದಾನದಡಿ ಶಾಲೆಗೆ ಎರಡು ಕಟ್ಟಣ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಶಾಲೆಗೆ ಭೇಟಿ ನೀಡಿದ್ದ ಆಗಿನ ಡಿಡಿಪಿಐ ಅವರು ಭರವಸೆ ನೀಡಿ ಹೋಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಿಮ್ಮ ಭರವಸೆಯೂ ಹಾಗೇ ಆದರೆ ಮಕ್ಕಳ ಗತಿ ಏನು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಚ್.ಪರುಶುರಾಮಪ್ಪ ಪ್ರಶ್ನಿಸಿದರು.
ದುಗ್ಗಾವತಿ ಶಾಲೆ ಶತಮಾನ ಕಂಡ ಶಾಲೆ ಎನಿಸಿಕೊಂಡಿರುವುದರಿಂದ ಸರ್ಕಾರದಿಂದ ₹ 1 ಕೋಟಿ ಅನುದಾನ ನೀಡಲಾಗುತ್ತದೆ. ಬಿಇಒ, ಸಿ.ಆರ್.ಪಿ, ಮುಖ್ಯಶಿಕ್ಷಕರು ಹಾಗೂ ಗ್ರಾಮಸ್ಥರು ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವ ಕಳುಹಿಸಲು ಬಿಇಒ ಎಲ್.ರವಿ ಅವರಿಗೆ ಡಿಡಿಪಿಐ ಸೂಚಿಸಿದರು.
ಶಿಥಿಲಗೊಂಡ ಕಟ್ಟಡದಲ್ಲಿ ಯಾವ ಕಾರಣಕ್ಕೂ ಮಕ್ಕಳು ಇರಬಾರದು. ಕಚೇರಿಯನ್ನು ಇನ್ನೊಂದು ಕೊಠಡಿಗೆ ಸ್ಥಳಾಂತರಿಸಬೇಕು. ಮಕ್ಕಳ ತರಗತಿಗೆ ಅನುಕೂಲ ಕಲ್ಪಿಸಿ ಎಂದು ಮುಖ್ಯ ಶಿಕ್ಷಕ ಮುಖ್ಯಶಿಕ್ಷಕ ಕೆ.ಜಿ.ರುದ್ರೆಗೌಡ್ರ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಾಗಮ್ಮನವಲಿ ಬಸವರಾಜ, ಮುಖಂಡರಾದ ಎಚ್.ಎಂ.ರಾಜಕುಮಾರ, ಹಲವಾಗಲು ಮಂಜುನಾಥ, ಅಂಗಡಿ ವೀರೇಶ್, ಎಚ್.ಮಹಾಂತೇಶ್, ಯೋಗೇಶ್, ಕೆ.ಬಸವರಾಜ ಹಾಗೂ ಗ್ರಾಮಸ್ಥರಿದ್ದರು.
ಎರಡು ದಿನಗಳ ಹಿಂದೆ ಮಳೆ ನೀರು ಕೊಠಡಿ ಸೇರಿ ಶಾಲಾ ಮಕ್ಕಳ ತರಗತಿಗೆ ತೀವ್ರ ತೊಂದರೆ ಉಂಟಾಗಿತ್ತು. ಈ ಬಗ್ಗೆ ಪ್ರಜಾವಾಣಿ ಜೂನ್ 10ರಂದು ‘ಶತಮಾನಕಂಡ ಶಾಲೆಗೆ ಕೊಠಡಿ ಸಮಸ್ಯೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.