ಡೊಳ್ಳು ಕುಣಿತ, ಮಹಿಳೆಯರು–ಯುವಕರ ನೃತ್ಯದೊಂದಿಗೆ ಸಾಗಿದ ಮೆರವಣಿಗೆ ಹಳೆ ಬಸ್ ನಿಲ್ದಾಣ, ತೇರು ಬೀದಿ, ಕುರುಬರ ಪೇಟೆ, ನಗರೇಶ್ವರ ಸ್ವಾಮಿ ರಸ್ತೆ ಮಾರ್ಗವಾಗಿ ಮಾರುಕಟ್ಟೆಯ ಕಿರಿದಾದ ಗಲ್ಲಿಗಳಲ್ಲಿ ಸಾಗಿತು. ಮಾರ್ಗಮಧ್ಯೆ ಹಳೆ ಬಸ್ ನಿಲ್ದಾಣದ ಬಳಿಯ ಬಸವೇಶ್ವರ ಪುತ್ಥಳಿಗೆ ಶಾ ನಮಸ್ಕರಿಸಿ ಮುನ್ನಡೆದರು. ಆಗಾಗ್ಗೆ ‘ತೊಲಗಿಸಿ, ತೊಲಗಿಸಿ ಕಾಂಗ್ರೆಸ್ ತೊಲಗಿಸಿ ಹಾಗೂ ಕಮಲವು ಅರಳಲಿ, ಕೇಸರಿ ಹರಡಲಿ’ ಎಂಬ ಜಯಘೋಷಗಳು ಮಾರ್ದನಿಸಿದವು.