ಸಿಂಗಪುರ: ಡಿಜಿಟಲ್ ಮಾಧ್ಯಮ ಬಳಸಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ಕಳ್ಳಸಾಗಣೆ ತಡೆಯುವ ಸಲುವಾಗಿ ವಿಶ್ವಸಂಸ್ಥೆ ಸಮಾವೇಶ ಆಯೋಜಿಸಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಒತ್ತಾಯಿಸಿದ್ದಾರೆ.
ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಇಂಪ್ಯಾಕ್ಟ್ ಸಮಾವೇಶದಲ್ಲಿ ಮಾತನಾಡಿದ ಅವರು, ’ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ತಂತ್ರಜ್ಞಾನವನ್ನು ಬಳಸುವುದನ್ನು ತಡೆಯುವಂತೆ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಪ್ರಸ್ತಾಪಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ’ ಎಂದೂ ಹೇಳಿದ್ದಾರೆ.
‘ಈ ವಿಷಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮುಂದೆ ತರುವ ಬಲಿಷ್ಠ ನಾಯಕರ ಅಗತ್ಯವಿದೆ. ಮುಂದಿನ ವರ್ಷ ಇದನ್ನು ಪ್ರಬಲ ಬೇಡಿಕೆಯಾಗಿ ಮಂಡಿಸಬೇಕು’ ಎಂದಿದ್ದಾರೆ.
ಇದೇ ವಿಷಯದ ಬಗ್ಗೆ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತು ನಾರ್ವೆ, ಸ್ವೀಡನ್ ಮತ್ತು ಕತಾರ್ನ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.