ಇಸ್ಲಾಮಾಬಾದ್: ಕರ್ತಾರ್ಪುರ ಕಾರಿಡಾರ್ನ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ನವೆಂಬರ್ನಲ್ಲಿ ನಡೆಯಲಿರುವ ಗುರು ನಾನಕ್ ಅವರ 550ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಉದ್ಘಾಟನೆ ಮಾಡಲು ಪಾಕಿಸ್ತಾನ ಸಿದ್ಧತೆ ನಡೆಸಿದೆ.
ಈ ಕುರಿತು ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ಯಾತ್ರಾರ್ಥಿಗಳ ಮೊದಲ ತಂಡ ನವೆಂಬರ್ 9ರಂದು ಪಾಕಿಸ್ತಾನಕ್ಕೆ ಆಗಮಿಸಲಿದೆ ಎಂದು ಟ್ರಿಬ್ಯೂನ್ ಉಲ್ಲೇಖಿಸಿದೆ.
ಕಾರಿಡಾರ್ನ ಮುಖ್ಯರಸ್ತೆ, ಸೇತುವೆಗಳು ಸೇರಿದಂತೆ ಗಡಿಯಿಂದ ಗುರುದ್ವಾರ ಸಾಹಿಬ್ವರೆಗಿನ ಕಾಮಗಾರಿ ಪೂರ್ಣಗೊಂಡಿದೆ. ಪಾಕಿಸ್ತಾನ ಕಡೆಯಿಂದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಜ್ವಾ ಕಾರಿಡಾರ್ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಉದ್ಘಾಟನೆಗೂ ಮುನ್ನ ಎರಡೂ ರಾಷ್ಟ್ರಗಳ ತಾಂತ್ರಿಕ ಸಮಿತಿ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ವಾತಂತ್ರ್ಯಾ ನಂತರ ನಿರ್ಮಾಣವಾಗಿರುವಮೊದಲ ವೀಸಾ ರಹಿತ ಕಾರಿಡಾರ್ ಆಗಿ ಇದು ಗುರುತಿಸಿಕೊಳ್ಳಲಿದೆ.
2018ರಲ್ಲಿ ಒಪ್ಪಂದ ಕರ್ತಾರ್ಪುರಕ್ಕೆ ಕಾರಿಡಾರ್ ಸಂಪರ್ಕ ಕುರಿತು 2018 ನವೆಂಬರ್ನಲ್ಲಿ ಭಾರತ–ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿತ್ತು. ಭಾರತದ ಗಡಿಯಿಂದ ಗುರುದ್ವಾರ ದರ್ಬಾರ್ ಸಾಹಿಬ್ ಕಣ್ಣಳತೆಯ ದೂರದಲ್ಲೇ ಇದ್ದು, ನಿತ್ಯ ಸಾವಿರಾರು ಸಿಖ್ ಯಾತ್ರಾರ್ಥಿಗಳು ಗಡಿಯಿಂದಲೇ ನಮನ ಸಲ್ಲಿಸುತ್ತಿದ್ದಾರೆ.