ಚಿಕ್ಕಮಗಳೂರು: ನೀರನ್ನು ಹಿತ ಮಿತವಾಗಿ ಬಳಕೆ ಮಾಡಬೇಕು. ಮನೆಗಳಲ್ಲಿ ನೀರು ಪೋಲಾಗಂದಂತೆ ಎಚ್ಚರ ವಹಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಡಿ.ಕಂಬೇಗೌಡ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಗೃಹ ರಕ್ಷಕ ದಳದ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚ ರಣೆಯಲ್ಲಿ ಅವರು ಮಾತನಾ ಡಿದರು.
‘ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ವಿಪತ್ತು ಸಂಭವಿಸುತ್ತಿದ್ದು, ಇದರಿಂದ ಅಕಾಲಿಕ ಮಳೆಯಾಗುತ್ತದೆ. ಇದರಿಂದಾಗಿ ಕುಡಿಯುವ ನೀರಿಗೆ ಅಭಾವ ಉಂಟಾಗುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪ್ರಜಾಪ್ರಭುತ್ವದ ಸರ್ಕಾರ, ಪೊಲೀಸ್ ವ್ಯವಸ್ಥೆ, ಕಠಿಣ ಕಾನೂನು ಇದ್ದರೂ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದದ ಸಂಗತಿ ಎಂದರು.
‘ಫೋಕ್ಸೊ ಕಾಯ್ದೆಯಡಿ ಅಪರಾಧಿಗಳಿಗೆ ಈ ಹಿಂದೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ಸುಪ್ರಿಂಕೋರ್ಟ್ ಈಚೆಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ್ದು, ಆರೋಪಿಗೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಅಲ್ಲದೇ ಮರಣ ದಂಡನೆ ವಿಧಿಸುವ ಅವಕಾಶವಿದೆ’ ಎಂದು ಅವರು ತಿಳಿಸಿದರು.
‘ಶೇ10 ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದ್ದು, ಕೆಲವರು ದೌರ್ಜನ್ಯಕ್ಕೆ ಒಳಗಾದ ಆರೇಳು ತಿಂಗಳು ತಡವಾಗಿ ದೂರು ದಾಖಲಿಸುತ್ತಾರೆ. ಪೋಕ್ಸೊ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
‘ಇತ್ತೀಚೆಗೆ ಮಾನವೀಯ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದ್ದು, ತಾತನ ಸಂಬಂಧ ಹೊಂದಿರುವವನು ಮೊಮ್ಮಗಳ ಮೇಲೆ ಅತ್ಯಾಚಾರ ಎಸೆಗಿದ ನಿದರ್ಶನಗಳು ಇವೆ. ಅನಾಥ ಮಕ್ಕಳು ಹೆಚ್ಚಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಸುತ್ತ ಮುತ್ತಲಿನ ಅನಾಥ ಮಕ್ಕಳ ಮೇಲೆ ನಿಗಾ ಇಡಬೇಕು. ಅವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ದುಶ್ಯಂತ್ ಮಾತನಾಡಿ, ‘ಕೈಗಾರಿಕೆಗಳಿಂದ ವಾತಾವರಣ ಹೆಚ್ಚಾಗಿ ಕಲುಷಿತಗೊಳ್ಳುತ್ತಿದ್ದು, ಮನುಷ್ಯನ ಸ್ವಾರ್ಥಕ್ಕೆ ಪರಿಸರ ಬಲಿಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಒಂದು ದಿನ ಪಶ್ಚಾತಾಪ ಪಡೆಬೇಕಾಗುತ್ತದೆ’ ಎಂದರು.
‘ಸ್ವಯಂ ಪ್ರೇರಣೆಯಿಂದ ಜನರು ಪರಿಸರ ಮಾಲಿನ್ಯ ತಡೆಗೆ ಮುಂದಾಗಬೇಕು. ತಿಂಗಳಿಗೆ ಒಂದಾದರೂ ಸಸಿ ನೆಟ್ಟು ಪೋಷಣೆ ಮಾಡಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗಿ ಪರಿಸರ ಸಂರಕ್ಷಣೆ ಮಾಡಬೇಕು’ ಎಂದರು.
ಬಾಲ ನ್ಯಾಯಮಂಡಳಿ ಅಧ್ಯಕ್ಷ ಎಚ್.ಸಿ.ನಟರಾಜ್, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಆರ್.ಅನಿಲ್ಕುಮಾರ್, ವಕೀಲರಾದ ಡಿ.ಬಿ.ಸುಜೇಂದ್ರ, ಆರ್.ನಾಗರಾಜ್, ಪತ್ರಕರ್ತ ಸ.ಗಿರಿಜಾಶಂಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.