ಕೊಲಂಬೊ:ಈಸ್ಟರ್ ಭಾನುವಾರ ನಡೆದಿದ್ದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ, ಗುಪ್ತಚರ ಇಲಾಖೆಯ ಮಾಹಿತಿಯನ್ನು ನಿರ್ಲಕ್ಷಿಸಿದ ಆರೋಪ ಮತ್ತು ಪ್ರಕರಣ ಸಂಬಂಧಿತ ದೋಷಗಳ ತನಿಖೆಗಾಗಿ ಅಧ್ಯಕ್ಷಮೈತ್ರಿಪಾಲ ಸಿರಿಸೇನಾ ಅವರು ಐವರು ಸದಸ್ಯರ ಸಮಿತಿಯನ್ನು ನೇಮಿಸಿದ್ದಾರೆ.
ಮೇಲ್ಮನವಿ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು, ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ನಿವೃತ್ತ ಆಡಳಿತಗಾರರನ್ನು ಈ ಸಮಿತಿ ಒಳಗೊಂಡಿದೆ.
ಉಗ್ರರು ಬಾಂಬ್ ದಾಳಿ ನಡೆಸುವ ಕುರಿತುರಾಷ್ಟ್ರೀಯ ಗುಪ್ತಚರ ಮುಖ್ಯಸ್ಥರು ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸಮಿತಿ ತನಿಖೆ ನಡೆಸಲಿದೆ.
ಪ್ರಕರಣದಸ್ವತಂತ್ರ ತನಿಖೆಗೆಸ್ಥಳೀಯ ಕ್ಯಾಥೊಲಿಕ್ ಚರ್ಚ್ ಕಾರ್ಡಿನಲ್ ಮಲ್ಕಮ್ ರಂಜಿತ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಸಮಿತಿ ರಚಿಸಲಾಗಿದೆ.
ಈ ಹಿಂದೆ ಪ್ರಕರಣದ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.ಅಮಾನತುಗೊಂಡಿರುವ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಮತ್ತುರಕ್ಷಣಾ ಖಾತೆ ಮಾಜಿ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಅವರನ್ನು ಬಂಧಿಸಲಾಗಿತ್ತು.