ಲಖನೌ: ಪ್ರಾರ್ಥನೆಯಿಂದ ಇತರರಿಗೆ ಅನನುಕೂಲ ಆಗಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಖಾಲಿದ್ ರಶೀದ್ ಫರಂಗಿ ಮಹಲಿ ಹೇಳಿದ್ದಾರೆ. ರಸ್ತೆಗಳಲ್ಲಿ ನಮಾಜ್ ಮಾಡುವ ವಿವಾದಾತ್ಮಕ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
‘ನಮಾಜ್ ಎಂಬುದು ದೇವರಿಗೆ ಸಲ್ಲಿಸುವ ಪ್ರಾರ್ಥನೆ. ನಮಾಜ್ನ ಮೂಲಕ ಇತರರಿಗೆ ಅನನುಕೂಲ ಉಂಟು ಮಾಡುವುದು ಸರಿಯಲ್ಲ’ ಎಂದು ಫರಂಗಿ ಮಹಲಿ ಹೇಳಿದ್ದಾರೆ. ಜತೆಗೆ, ದಿನವೂ ರಸ್ತೆಯಲ್ಲಿ ನಮಾಜ್ ಮಾಡುವ ಪರಿಪಾಟ ಇಲ್ಲ, ಶುಕ್ರವಾರ ಮಾತ್ರ ಹೀಗೆ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ.
ಕೆಲವು ಮಸೀದಿಗಳಲ್ಲಿ ಸ್ಥಳಾಭಾವದಿಂದಾಗಿ ಜನರು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಆದರೆ, ಇದಕ್ಕೆ ಯಾರದ್ದಾದರೂ ಆಕ್ಷೇಪ ಇದ್ದರೆ ರಸ್ತೆಯಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.
ಬಲವಂತದಿಂದ ‘ಜೈ ಶ್ರೀರಾಂ’ ಘೋಷಣೆ ಕೂಗಿಸುತ್ತಿರುವುದರ ಬಗ್ಗೆಯೂ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಹಿಂದೂ ಧರ್ಮ ದಲ್ಲಿ ಬಲವಂತಕ್ಕೆ ಅವಕಾಶವೇ ಇಲ್ಲ. ತನ್ನ ಪರವಾಗಿ ಬಲವಂತದಿಂದ ಘೋಷಣೆ ಕೂಗಿಸುವಂತೆ ಶ್ರೀರಾಮ ತನ್ನ ಅನುಯಾಯಿಗಳಿಗೂ ಎಂದೂ ಹೇಳಿಲ್ಲ. ರಾಮ ಮರ್ಯಾದಾ ಪುರುಷೋತ್ತಮ. ಆತನ ಹೆಸರಿನಲ್ಲಿ ಜನರು ಅವಮರ್ಯಾದೆಯಿಂದ ವರ್ತಿಸುವುದಕ್ಕೆ ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.