ಇಸ್ಲಾಮಾಬಾದ್: ಭಾರತದ ಸೇನೆಯು ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಈ ಕುರಿತು ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರನ್ನು ಕರೆಸಿ ಬುಧವಾರ ಪ್ರತಿಭಟನೆ ದಾಖಲಿಸಿದೆ.
‘ಭಾರತದ ಈ ಕ್ರಮವನ್ನು ಪಾಕ್ ಖಂಡಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್ ಫೈಸಲ್ ಈ ವೇಳೆ ಹೇಳಿದ್ದಾರೆ’ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಚೀನಾದ 50 ಕಾರ್ಮಿಕರ ಸ್ಥಳಾಂತರ ‘ಗಡಿ ನಿಯಂತ್ರಣ ರೇಖೆ ಬಳಿ ಭಾರತ ಸತತವಾಗಿ ದಾಳಿ ನಡೆಸುತ್ತಿರುವುದರಿಂದ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಲವಿದ್ಯುತ್ ಯೋಜನೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಚೀನಾದ 50 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ’ ಎಂದು ಪಾಕ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನೀಲಂ ಮತ್ತು ಝೇಲಂ ನದಿಗಳಿಗೆ ಅಣೆಕಟ್ಟು ನಿರ್ಮಿಸುತ್ತಿರುವ ಕಾಮಗಾರಿಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು.