ಇಸ್ಲಾಮಾಬಾದ್: ಭಾರತದ ದಬ್ಬಾಳಿಕೆಯ ಸಂತ್ರಸ್ತರಾಗಿರುವ ಜಮ್ಮು ಮತ್ತು ಕಾಶ್ಮೀರದ ಜನರ ಬಗ್ಗೆ ದುಃಖವಿದೆ.ಕಾಶ್ಮೀರದ ಸಹೋದರರೊಂದಿಗೆ ನಾವಿದ್ದೇವೆ ಎಂದು ಪಾಕಿಸ್ತಾನದಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನದ ಸ್ವಾತಂತ್ರ್ಯದಿನಾಚರಣೆಯ ವೇಳೆ ಮಾತನಾಡಿದ ಇಮ್ರಾನ್ ಖಾನ್, ಸ್ವಾತಂತ್ರ್ಯ ದಿನ ಎಂಬು ಖುಷಿಯ ದಿನ. ಆದರೆ ಭಾರತದ ದಬ್ಬಾಳಿಕೆಯ ಸಂತ್ರಸ್ತರಾಗಿರುವ ಜಮ್ಮು ಕಾಶ್ಮೀರದ ಸಹೋದರರ ಬಗ್ಗೆ ಯೋಚಿಸಿದರೆ ನಮಗೆ ದುಃಖವಾಗುತ್ತದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆಯನ್ನು ನಾನು ಕಾಶ್ಮೀರದ ಸಹೋದರರಿಗೆ ನೀಡುತ್ತೇನೆ ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾ ದಿನ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.ಆದಾಗ್ಯೂ ಪಾಕಿಸ್ತಾನ ತಮ್ಮ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಕಪ್ಪುದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ಭಾರತ ರದ್ದುಗೊಳಿಸಿದ್ದಕ್ಕಾಗಿ ಪಾಕ್ ಈ ರೀತಿ ಪ್ರತಿಭಟನೆ ಹಮ್ಮಿಕೊಂಡಿದೆ.
ಏತನ್ಮಧ್ಯೆ, ಬುಧವಾರ ಇಸ್ಲಾಮಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ, ಕಾಶ್ಮೀರಿಗಳು ಮತ್ತು ಪಾಕಿಸ್ತಾನದವರು ಒಂದೇ ಎಂದಿದ್ದಾರೆ.ಮಾತುಕತೆ ಮೂಲಕ ನಾವು ಕಾಶ್ಮೀರ ಸಮಸ್ಯೆ ಬಗೆ ಹರಿಸಬೇಕೆಂದಿದ್ದೇವೆ ಎಂದ ಆಲ್ವಿ, ಈ ಪರಿಸ್ಥಿತಿಯಲ್ಲಿ ನಾವು ಅವರನ್ನು ಒಬ್ಬಂಟಿಯಾಗಿ ಮಾಡುವುದಿಲ್ಲ.ಅವರ ಕಣ್ಣೀರು ನಮ್ಮ ಹೃದಯಕ್ಕೆ ತಾಗುತ್ತಿದ್ದು ನಮ್ಮಿಬ್ಬರ ದುಃಖವೊಂದೇ. ನಾವು ಅವರೊಂದಿಗೆ ಇದ್ದೇವೆ.ನಾವು ಸದಾ ಅವರೊಂದಿಗೆ ಇರುತ್ತೇವೆ ಮತ್ತು ಇದು ಮುಂದುವರಿಯುವುದು ಎಂದು ಪಾಕ್ ಅಧ್ಯಕ್ಷರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನ ಶಾಂತಿಪ್ರಿಯ ದೇಶವಾಗಿದ್ದು ಮಾತುಕತೆ ಮತ್ತು ಒಪ್ಪಂದದ ಮೂಲಕ ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕೆಂದಿದ್ದೇವೆ.ಅಂದಹಾಗೆ ನಮ್ಮ ಶಾಂತಿ ನೀತಿಯನ್ನು ನಮ್ಮ ದೌರ್ಬಲ್ಯವೆಂದು ಭಾರತ ಪರಿಗಣಿಸಬಾರದು ಎಂದು ಆಲ್ವಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.