ಕಠ್ಮಂಡು: ಪ್ರವಾಸಕ್ಕೆ ತೆರಳಿದ್ದ ನಾಲ್ವರು ಮಕ್ಕಳೂ ಸೇರಿದಂತೆ ಕೇರಳದ ಒಟ್ಟು ಎಂಟು ಮಂದಿ ಇಲ್ಲಿನ ರೆಸಾರ್ಟ್ವೊಂದರಲ್ಲಿ ಮಂಗಳವಾರ ಮೃತಪಟ್ಟಿದ್ದು, ಅನಿಲ ಸೋರಿಕೆಯೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.
‘ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ವಿಮಾನದ ಮೂಲಕ ಎಚ್ಎಎಂಎಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಸಿಂಗ್ ರಾಥೋಡ್ ಹೇಳಿದರು.
‘ಇಬ್ಬರು ದಂಪತಿ, ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಕೇರಳದಿಂದ ಪ್ರಸಿದ್ಧ ಪ್ರವಾಸಿತಾಣ ಪೋಖರಾಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುವ ವೇಳೆ ಎವೆರೆಸ್ಟ್ ಪನೋರಮಾ ರೆಸಾರ್ಟ್ನಲ್ಲಿ ಸೋಮವಾರ ರಾತ್ರಿ ತಂಗಿದ್ದರು’ ಎಂದು ಮಾಹಿತಿ ನೀಡಿದರು.
ಕೊಠಡಿಯನ್ನು ಬಿಸಿಯಾಗಿಡಲು ಗ್ಯಾಸ್ ಹೀಟರ್ ಅನ್ನು ಹಾಕಿಕೊಂಡಿದ್ದಾರೆ. ಕೊಠಡಿಯ ಎಲ್ಲಾ ಕಿಟಕಿಗಳನ್ನು ಮುಚ್ಚಿದ್ದ ಕಾರಣ, ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹಗಳು ಬುಧವಾರ ಕೇರಳಕ್ಕೆ ಬರುವ ನಿರೀಕ್ಷೆ ಇದೆ. ‘ಭಾರತದ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಕೇರಳದ ಅಧಿಕಾರಿಗಳು ತಿಳಿಸಿದ್ದಾರೆ.