ಕೊಲಂಬೊ: ಶ್ರೀಲಂಕಾದ ಕಟ್ಟಣಕುಡಿ ನಗರದಲ್ಲಿರುವ ನ್ಯಾಷನಲ್ ತೌಹೀದ್ ಜಮಾತ್ (ಎನ್ಟಿಜೆ) ಸಂಘಟನೆಯ ಮುಖ್ಯ ಕಚೇರಿ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದರು.
ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಎನ್ಟಿಜೆ ಸಂಚು ರೂಪಿಸಿತ್ತು ಎನ್ನಲಾಗಿದೆ. ಎನ್ಟಿಜೆಯನ್ನು ಶ್ರೀಲಂಕಾ ಸರ್ಕಾರ ಶನಿವಾರ ನಿಷೇಧಿಸಿದ ಬಳಿಕ ಸೇನಾ ಸಿಬ್ಬಂದಿ ಮತ್ತು ಪೊಲೀಸರು ಈ ಸಂಘಟನೆಯ ಸದಸ್ಯರ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು.
ಎನ್ಟಿಜೆ ನಾಯಕ ಝಹ್ರಾನ್ ಹಶೀಂ ತಂದೆ ಮತ್ತು ಇಬ್ಬರು ಸಹೋದರು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ.
ಶುಕ್ರವಾರ ರಾತ್ರಿ ಇವರ ಮನೆ ಮೇಲೆ ಸೇನೆ ಸಹಯೋಗದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿಒಟ್ಟು 15 ಮಂದಿ ಸಾವಿಗೀಡಾಗಿದ್ದರು. ಝೈನೀ ಹಶೀಂ, ರಿಲ್ವಾನ್ ಹಶೀಂ ಮತ್ತು ಇವರ ತಂದೆ ಮೊಹಮ್ಮದ್ ಹಶೀಂ ಮೃತಪಟ್ಟಿದ್ದರು.