ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರನ್ನು ಆಕರ್ಷಿಸಲು ಬೈಕ್ ವ್ಹೀಲಿಂಗ್ ಮಾಡಿದ್ದ ನಾಲ್ವರು ಯುವಕರು ಹಾಗೂ ಕೃತ್ಯಕ್ಕೆ ಬೈಕ್ ನೀಡಿದ್ದ ಮಾಲೀಕರಿಗೆ ₹18,400 ದಂಡ ವಿಧಿಸಿ ನಗರದ ಮೆಯೊ ಹಾಲ್ ನ್ಯಾಯಾಲಯವು ಆದೇಶ ಹೊರಡಿಸಿದೆ.
ದಂಡ ಪಾವತಿ ಮಾಡದಿದ್ದರೆ, 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಂದಿರಾನಗರ ಬಳಿಯ ಕೇರಳ ನಿಕೇತನ್ ಶಾಲೆ ಎದುರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಹಲಸೂರು ಸಂಚಾರ ಠಾಣೆ ಪೊಲೀಸರು, ಆ ಸ್ಥಳದಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಬೈಕ್ ಸಮೇತ ಶಾಲೆ ಎದುರಿನ ರಸ್ತೆಗೆ ಬಂದಿದ್ದ ಸಾಗರ್, ರಾಜೇಶ್, ಆದಿಲ್ ಹಾಗೂ ಅವರ ಇನ್ನೊಬ್ಬ ಸ್ನೇಹಿತ, ವ್ಹೀಲಿಂಗ್ ಮಾಡಲಾರಂಭಿಸಿದ್ದರು. ಹೆಲ್ಮೆಟ್ ಧರಿಸಿರಲಿಲ್ಲ. ಅದರ ವಿಡಿಯೊ ಚಿತ್ರೀಕರಿಸಿ ಫೋಟೊ ತೆಗೆದಿದ್ದ ಪೊಲೀಸರು, ನಾಲ್ವರನ್ನು ಬಂಧಿಸಿದ್ದರು.
ಸಂಬಂಧಿಕರು ಹಾಗೂ ಸ್ನೇಹಿತರಿಂದ ಬೈಕ್ಗಳನ್ನು ಪಡೆದುಕೊಂಡು ಬಂದು ಆರೋಪಿಗಳು ವ್ಹೀಲಿಂಗ್ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಅದೇ ಕಾರಣಕ್ಕೆ, ನಾಲ್ಕು ಬೈಕ್ಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಇನ್ಸ್ಪೆಕ್ಟರ್ ಎಸ್.ಟಿ.ಯೋಗೇಶ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.