ಇಸ್ಲಾಮಾಬಾದ್: ಸಿಯಾಚಿನ್ ಪ್ರದೇಶ ವಿಶ್ವದ ಅತಿದೊಡ್ಡ ಯುದ್ಧಭೂಮಿಯಾಗಿದ್ದು, ವಿವಾದಿತ ಗಡಿಯಾಗಿದೆ. ಭಾರತ ಇದನ್ನು ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಬಾರದು ಎಂದು ಪಾಕಿಸ್ತಾನ ಒತ್ತಾಯಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ, ಮುಹಮ್ಮದ್ ಫೈಸಲ್, ‘ಸಿಯಾಚಿನ್ ಭಾಗವನ್ನು ಭಾರತ ಅತಿಕ್ರಮಿಸಿದೆ. ಇದು ವಿವಾದಿತ ಪ್ರದೇಶ. ಇದನ್ನು ಹೇಗೆ ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಲು ಸಾಧ್ಯ’ ಎಂದರು.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಅಕ್ಟೋಬರ್ 21ರಂದು ಸಿಯಾಚಿನ್ ಶಿಬಿರದಿಂದ ಕುಮಾರ್ ಪೋಸ್ಟ್ವರೆಗಿನ ಪೂರ್ಣ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಲಾಗುವುದು’ ಎಂದು ಪ್ರಕಟಿಸಿದ್ದರು.
ಈ ವಿಷಯದಲ್ಲಿ ಪಾಕಿಸ್ತಾನ ಭಾರತದಿಂದ ಒಳ್ಳೆಯದನ್ನು ಅಥವಾ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸುತ್ತಿಲ್ಲ ಎಂದು ಫೈಸಲ್ ಹೇಳಿದರು.
ಈ ತಿಂಗಳ ಆರಂಭದಲ್ಲಿ ಪ್ರವಾಸಿಗಳಿಗೆ ಮುಕ್ತಗೊಳಿಸಲಾದ ಕರ್ತಾರ್ಪುರಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಭಾರತ ಅಡ್ಡಿಪಡಿಸುತ್ತಿದೆ. ಸುಮಾರು 5 ಸಾವಿರ ಜನ ಭೇಟಿ ನೀಡಬೇಕಿತ್ತು. ವಾಸ್ತವ ಸಂಖ್ಯೆ ಅದಕ್ಕೂ ಕಡಿಮೆ ಇದೆ ಎಂದರು.
ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ನಿಮಿತ್ತ ಯಾತ್ರಿಗಳಿಗೆ ಅನುವಾಗುವಂತೆ ಕರ್ತಾರ್ಪುರ ಕಾರಿಡಾರ್ ಅನ್ನು ಈ ತಿಂಗಳ ಆರಂಭದಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿತ್ತು.