ನವದೆಹಲಿ: ಭಾರತದಿಂದ ಬ್ರಿಟನ್ಗೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ ಮಲ್ಯ, ಕ್ರಿಕೆಟ್ನ ಮಾಜಿ ಆಡಳಿತಗಾರ ಲಲಿತ್ ಮೋದಿ ಮತ್ತು ವಜ್ರ ಉದ್ಯಮಿ ನೀರವ್ ಮೋದಿ ಅವರನ್ನು ಸಾಧ್ಯವಾದಷ್ಟು ಬೇಗನೆ ಹಸ್ತಾಂತರಿಸುವಂತೆ ಆ ದೇಶವನ್ನು ಭಾರತ ಕೋರಿದೆ.
‘ಗೃಹ ವ್ಯವಹಾರಗಳ ಮೂರನೇ ಸಂವಾದ’ದಲ್ಲಿ ಭಾರತವು ಈ ಬೇಡಿಕೆಯನ್ನು ಮುಂದಿಟ್ಟಿದೆ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ನಿಯೋಗವು ಸಂವಾದದಲ್ಲಿ ಭಾರತವನ್ನು ಪ್ರತಿನಿಧಿಸಿತ್ತು.
ಮಲ್ಯ, ಲಲಿತ್ ಮೋದಿ ಮತ್ತು ನೀರವ್ ಮೋದಿಗೆ ಸಂಬಂಧಿಸಿದ ವಿಚಾರ ವಿವರವಾಗಿ ಚರ್ಚೆಯಾಗಿದೆ. ಇದಕ್ಕೆ ಸಂಬಂಧಿಸಿ ಅಗತ್ಯ ನೆರವು ನೀಡಲಾಗುವುದು ಎಂದು ಬ್ರಿಟನ್ನ ನಿಯೋಗವು ಭರವಸೆ ನೀಡಿದೆ.
ಬ್ಯಾಂಕುಗಳಿಗೆ ₹9 ಸಾವಿರ ಕೋಟಿ ಸಾಲ ಬಾಕಿ ಇರಿಸಿರುವ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಅವ್ಯವಹಾರ ಎಸಗಿದ ಆರೋಪ ಲಲಿತ್ ಮೋದಿ ಮೇಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹13 ಸಾವಿರ ಕೋಟಿ ವಂಚಿಸಿದ ಪ್ರಕರಣದಲ್ಲಿ ನೀರವ್ ಆರೋಪಿ.