ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾದ ಕುಟುಂಬವೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕು, ಹಾಸಿಗೆ ಸಿಗುತ್ತಿಲ್ಲ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಮುಂದೆಯೇ ಗೋಳಾಡಿದ ಪ್ರಕರಣ ಗುರುವಾರ ನಡೆದಿದೆ.
ಬನಶಂಕರಿ ಬಡಾವಣೆಯವರು ಎನ್ನಲಾದ ಈ ಕುಟುಂಬ ‘ಕೃಷ್ಣಾ’ದ ಗೇಟ್ ಮುಂದೆ ಏರಿದ ಧ್ವನಿಯಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿತು.
‘ಯಾವುದೇ ಆಸ್ಪತ್ರೆಗೆ ಹೋದರೂ ಹಾಸಿಗೆ ಇಲ್ಲ ಎನ್ನುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದೇವೆ ಯಾವ ಆಸ್ಪತ್ರೆಗೆ ಹೋಗಬೇಕು ನೀವೇ ಹೇಳಿ, ವ್ಯವಸ್ಥೆ ಮಾಡಿ’ ಎಂದು ಕುಟುಂಬದವರು ಗೋಗರೆದರು.
‘ಆದರೆ ಕೃಷ್ಣಾದಲ್ಲಿ ಮುಖ್ಯಮಂತ್ರಿ ಇರಲಿಲ್ಲ. ಪೊಲೀಸ್ ಮತ್ತು ಇತರ ಸಿಬ್ಬಂದಿ ಸೇರಿ, ಸೋಂಕಿತರ ಕುಟುಂಬವನ್ನು ಆಂಬುಲೆನ್ಸ್ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು’ ಎಂದು ಮೂಲಗಳು ಹೇಳಿವೆ.