ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರ ಸಂಪರ್ಕಕ್ಕೆ ಬಂದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಮಾಜಿ ಶಾಸಕ ಡಿ.ಎನ್.ಜೀವರಾಜ್ ಕ್ವಾರಂಟೈನ್ ಆಗಿದ್ದಾರೆ.
ಮುಖ್ಯಮಂತ್ರಿಯವರ ಪುತ್ರಿ ಪದ್ಮಾವತಿ ಅವರಿಗೂ ಪಾಸಿಟವ್ ಆಗಿದ್ದು, ಅವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಡಿಯೂರಪ್ಪ ಅವರಿಗಾಗಲಿ, ಪದ್ಮಾವತಿಗಾಗಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ.
ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರೂ ರ್ಯಾಪಿಟ್ ಆಂಟಿಜೆನ್ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ಬಂದಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಬೊಮ್ಮಾಯಿ ಅವರೂ ಪರೀಕ್ಷೆ ಮಾಡಿಸಿದ್ದು ಅವರಿಗೂ ನೆಗೆಟಿವ್ ಬಂದಿದೆ.
ಬಸವರಾಜ ಬೊಮ್ಮಾಯಿ ಮತ್ತು ಕಮಲ್ ಪಂತ್ ಅವರು ಸ್ವಗೃಹಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಮತ್ತು ‘ಕಾವೇರಿ’ಯಲ್ಲೂ ಕೆಲವು ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನೂ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ಗೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.