ಬೆಂಗಳೂರು: ಕೋವಿಡ್–19 ಸೃಷ್ಟಿಸುತ್ತಿರುವ ನವಯುಗದ ತಾರತಮ್ಯ ಮತ್ತು ಅಸ್ಪೃಶ್ಯತೆಗೆ ಜೀವ ಹಾನಿಯಾಗದಿರಲಿ ಎಂದು ಮಾಜಿ ಮುಖ್ಯಮಂತ್ರಿಎಚ್.ಡಿ ಕುಮಾರಸ್ವಾಮಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ದೊಡ್ಡಬಳ್ಳಾಪುರದ ನಾಗರಾಜ್ ಎಂಬುವವರು ಕೋವಿಡ್ಗೆ ಸಂಬಂಧಿಸಿದಂತೆ ಅಪಮಾನಕ್ಕೀಡಾಗಿದ್ದರು ಎನ್ನಲಾಗಿದ್ದು, ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದೇ ವಿಚಾರದ ಮೇಲೆ ಟ್ವೀಟ್ ಮಾಡಿರುವ ಎಚ್.ಡಿ ಕುಮಾರಸ್ವಾಮಿ, ‘ಕೋವಿಡ್ನಿಂದ ಸೃಷ್ಟಿಯಾಗಿರುವ ನವಯುಗದ ತಾರತಮ್ಯ, ಅಸ್ಪೃಶ್ಯತೆಗೆ ಮನನೊಂದು ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರು ಆತ್ಮಹತ್ಯೆಗೆ ಶರಣಾದರೆಂಬ ಸುದ್ದಿ ತಿಳಿದು ಬೇಸರವಾಗಿದೆ. ಸರ್ಕಾರ ಸೋಂಕಿತರು, ಕುಟುಂಬದವರ ವಿಚಾರದಲ್ಲಿ ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದು ಇದೇ ಕಾರಣಕ್ಕೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಕ್ವಾರಂಟೈನ್ ಮಾಡಲೆಂದು ಸೋಂಕಿತರ ಮನೆಗಳ ಮುಂದೆ ಸೂಚನಾ ಫಲಕ ಹಾಕುವುದು, ಅವರ ಮನೆ ಬಂದ್ ಮಾಡುವುದು ಹೊಸ ತಾರತಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಸರ್ಕಾರದ ಅವಾಂತರಗಳಿಗೆ ಇದೊಂದು ಉದಾಹರಣೆಯಷ್ಟೆ. ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂಥ ಘಟನೆಗಳು ಹೆಚ್ಚದಿರಲಿ. ಸರ್ಕಾರ ಜವಾಬ್ದಾರಿ ಮೆರೆಯಲಿ,’ ಎಂದು ಎಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
#COVID19 ನಿಂದ ಸೃಷ್ಟಿಯಾಗಿರುವ ನವಯುಗದ ತಾರತಮ್ಯ, ಅಸ್ಪೃಶ್ಯತೆಗೆ ಮನನೊಂದು ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರು ಆತ್ಮಹತ್ಯೆಗೆ ಶರಣಾದರೆಂಬ ಸುದ್ದಿ ತಿಳಿದು ಬೇಸರವಾಗಿದೆ. ಸರ್ಕಾರ ಸೋಂಕಿತರು,ಕುಟುಂಬದವರ ವಿಚಾರದಲ್ಲಿ ಸೂಕ್ಷ್ಮವಾಗಿ,ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದು ಇದೇ ಕಾರಣಕ್ಕೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.1/2
— H D Kumaraswamy (@hd_kumaraswamy) July 21, 2020
ಇದಕ್ಕೂ ಹಿಂದೆ ಜುಲೈ 19ರಂದು ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಅವರು ‘ಕೋವಿಡ್ ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ. ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು,’ ಎಂದು ಅವರು ಹೇಳಿದ್ದರು.
#COVID19 ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ.ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ,ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು.
— H D Kumaraswamy (@hd_kumaraswamy) July 19, 2020
1/4
ಏನಿದು ದೊಡ್ಡಬಳ್ಳಾಪುರದ ಘಟನೆ?
ಮಗನಿಗೆ ಕೋವಿಡ್-19 ದೃಢಪಟ್ಟು ಆಸ್ಪತ್ರೆಯಲ್ಲಿದ್ದರೂ ಸಹ ಅಕ್ಕಪಕ್ಕದವರು ನಿಂದಿಸಿದ್ದರಿಂದ ಮನನೊಂದು ದೊಡ್ಡಬಳ್ಳಾಪುರದ ಖಾಸ್ಭಾಗ್ ನಿವಾಸಿ ನಾಗರಾಜ್(52) ಮಂಗಳವಾರ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.
ಮೃತರ ಮಗಳು ಎಚ್.ಎನ್.ಆಶಾ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ಖಾಸ್ಬಾಗ್ ವಾರ್ಡ್ನ ಮುಖಂಡರಾದ ಮುದ್ದಪ್ಪ, ಹನುಮಂತರಾಯಪ್ಪ ಅವರು ನಮ್ಮ ತಂದೆಯ ಮೊಬೈಲ್ಗೆ ಕರೆ ಮಾಡಿ ಇಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋಗಬೇಕು. ನೀವುಗಳು ಇಲ್ಲಿಯೇ ಇದ್ದರೆ ಇತರರಿಗೂ ಕೊರೊನಾ ಸೋಂಕು ಹರಡುತ್ತದೆ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮ ತಂದೆಗೆ ಕೊರೊನಾ ಸೋಂಕು ಇರಲಿಲ್ಲ. ಆದರೆ ನಮ್ಮ ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಆತನಿಗೆ ಕೋವಿಡ್-19 ದೃಢಪಟ್ಟಿತ್ತು. ಇದನ್ನೇ ನೆಪ ಮಾಡಿಕೊಂಡು ನಿಂದಿಸಿ ಮನೆ ಖಾಲಿಮಾಡಿಕೊಂಡು ಇಲ್ಲಿಂದ ಬೇರೆ ಕಡೆಗೆ ಹೋಗುವಂತೆ ಒತ್ತಡ ಹೇರಿದ್ದರಿಂದ ಮಾನಸಿಕವಾಗಿ ನೊಂದಿದ್ದರು. ಸೋಮವಾರ ಮನೆಯಿಂದ ಹೊರ ಹೋದವರು ಹೆಸರಘಟ್ಟ ಸಮೀಪದ ಕೆರೆ ಸಮೀಪ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ನಮ್ಮ ತಂದೆಯವರು ನನಗೆ ಕರೆ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ. ನಮ್ಮ ತಂದೆಯವರೊಂದಿಗೆ ನಡೆದಿರುವ ಸಂಭಾಷಣೆಯ ಧ್ವನಿ ಮುದ್ರಣವು ಸಹ ಇದೆ. ಹೀಗಾಗಿ ಹನುಮಂತರಾಯಪ್ಪ, ಮುದ್ದಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.