ಬೆಂಗಳೂರು: ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ 79ಎ ಹಾಗೂ 79 ಬಿ ಉಲ್ಲಂಘನೆಯ ಸಂಶಯದಡಿ ದಾಖಲಾಗಿರುವ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
1974ರ ಮಾರ್ಚ್ 1ರಿಂದಲೇ ಅನ್ವಯವಾಗುವಂತೆ, ಕಾಯ್ದೆಯ ಸೆಕ್ಷನ್ 79 ಎ ಮತ್ತು 79 ಬಿ ಅನ್ನು ನಿರಸನಗೊಳಿಸಲಾಗಿದೆ. ಈ ಕಾಯ್ದೆಯಡಿ ದಾಖಲಾಗಿ, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳ ನ್ಯಾಯಾಲಯಗಳಲ್ಲಿ ಇರುವ 13,814 ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು ಎಂದು ತಿಳಿಸಿದ್ದಾರೆ.
ಕಾಯ್ದೆ ತಿದ್ದುಪಡಿಗೆ ಮೊದಲು (ಜುಲೈ 13ರ ಮೊದಲು) ಉಪವಿಭಾಗಾಧಿಕಾರಿಗಳು ಇತ್ಯರ್ಥಪಡಿಸಿರುವ ಜಮೀನುಗಳ ಪಹಣಿಯನ್ನು ಸರ್ಕಾರದ ಹೆಸರಿಗೆ ಮಾಡಬೇಕು. 2012ರ ನವೆಂಬರ್ 28ಕ್ಕಿಂತ ಮೊದಲು ದಾಖಲಾಗಿರುವ ಪ್ರಕರಣಗಳಲ್ಲಿ ಖರೀದಿದಾರರ ಹೆಸರಿಗೆ ಪಹಣಿ ಮಾಡಿಕೊಡಬೇಕು. 2012ರ ನವೆಂಬರ್ 28ರ ನಂತರ ದಾಖಲಾದ ಪ್ರಕರಣಗಳಲ್ಲಿ ಖರೀದಿದಾರರ ಹೆಸರಿಗೆ ಪಹಣಿ ದಾಖಲಾಗಿದ್ದು, ಪಹಣಿ ಕಲಂ 11ರಲ್ಲಿ ದಾಖಲಾಗಿರುವ ’ಭೂಸುಧಾರಣಾ ಕಾಯ್ದೆಯ ಉಲ್ಲಂಘನೆಯ ಸಂಶಯವಿದೆ‘ ಎಂಬ ನಮೂದನ್ನು ತೆಗೆದು ಹಾಕಬೇಕು.
ಇನ್ನು ಮುಂದೆ ಮ್ಯುಟೇಷನ್ ಮಾಡುವ ಸಂದರ್ಭದಲ್ಲಿ ಕಲಂ 79 ಎ ಹಾಗೂ 79 ಬಿ ಉಲ್ಲಂಘನೆಯ ಸಂಶಯದಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ರದ್ದುಪಡಿಸಬೇಕು ಎಂದೂ ಹೇಳಿದ್ದಾರೆ. ಈ ಪ್ರಕರಣಗಳನ್ನು ಇತ್ಯರ್ಥಪಡಿಸಲು ಭೂಮಿ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು ಎಂದು ಭೂಮಿ ಉಸ್ತುವಾರಿ ಕೋಶದ ನಿರ್ದೇಶಕರಿಗೆ ಸೂಚಿಸಿದ್ದಾರೆ.