ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ಪಟ್ಟಣದ ಮುಸ್ಲಿಂ ಕುಟುಂಬವೊಂದು ಎರಡು ತಲೆಮಾರಿನಿಂದಲೂ ಪಂಚಮಿ ಹಬ್ಬದ ಸಂದರ್ಭದಲ್ಲಿ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿಯನ್ನು ಆಚರಣೆ ಮಾಡುತ್ತಿದೆ.
ಪಟ್ಟಣದ 3ನೇ ವಾರ್ಡ್ ನಿವಾಸಿಯಾಗಿರುವ, ಮೂಲತಃ ಕೊಟ್ಟೂರಿನ ತೂಲಹಳ್ಳಿ ಗ್ರಾಮದವರಾದ ಜಿಂದವಲಿ ಸಾಹೇಬ್ ಪುತ್ರ ಖಾಸಿಂ ಪೀರ್ ತಮ್ಮ ಕುಟುಂಬ ಸಮೇತವಾಗಿ ಹೋಗಿ ಶುಕ್ರವಾರ ನಾಗ ಚತುರ್ಥಿ ನಿಮಿತ್ತ ಅಂಗಡಿ ಸಿದ್ದಣ್ಣನವರ ತೋಟದಲ್ಲಿನ ಹುತ್ತಕ್ಕೆ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಹಾಲೆರೆದರು.
ಇವರ ವಂಶಸ್ಥರು ಕೂಡ ಪ್ರತಿ ವರ್ಷ ತಪ್ಪದೆ ನಾಗರ ಪಂಚಮಿ ಆಚರಣೆ ಮಾಡುತ್ತಿದ್ದಾರೆ.
‘ನಮ್ಮ ಮೂಲ ಗ್ರಾಮವಾದ ತೂಲಹಳ್ಳಿಯಲ್ಲಿನ ಮನೆ ಮುಂದೆಯೇ ಹುತ್ತ ಹಾಗೂ ನಾಗರಕಲ್ಲುಗಳಿದ್ದು, ಇಡಿ ಗ್ರಾಮದ ಜನರು ಅಲ್ಲಿಯೇ ಹಾಲು ಹಾಕುತ್ತಾರೆ. ಇದರಿಂದ ನಮ್ಮ ತಾತನ ಕಾಲದಿಂದಲೂ ನಾಗರ ಕಲ್ಲಿಗೆ ಹಾಗೂ ಹುತ್ತಕ್ಕೆ ಹಾಲೆರೆಯುತ್ತ ಬಂದಿದ್ದೇವೆ. ತೂಲಹಳ್ಳಿಯಲ್ಲಿ ಈಗಿರುವ ನಮ್ಮ ವಂಶಸ್ಥರು ಸೇರಿದಂತೆ ನಾವು ಕೂಡ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೊಗುತ್ತಿದ್ದೇವೆ’ ಎಂದು ಖಾಸಿಂ ಪೀರ್ ಹೇಳುತ್ತಾರೆ.